ಈ ವಿಚಾರ ತಿಳಿದ ಭಾರತೀಯ ವಾಯುಸೇನೆಯ ಗುರುಡಾ ಪಡೆಯ ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಲ ನೇತೃತ್ವದ ತಂಡ ಆ ಮನೆಯನ್ನು ಸುತ್ತುವರೆದಿತ್ತು. ಸ್ವತಃ ಐಎಎಫ್ ಕಮಾಂಡೋ ನಿರಾಲ ಅವರು ಕಾರ್ಯಾಚರಣೆಯಲ್ಲಿ ತಾವೇ ಮುಂದಾಗಿ ನಿಂತು ಉಗ್ರರ ವಿರುದ್ಧ ದಾಳಿಗೆ ಮುಂದಾಗಿದ್ದರು. ಈ ವೇಳೆ ಉಗ್ರರು ಸೈನಿಕರನ್ನು ಗುರಿಯಾಗಿಸಿಕೊಂಡು ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದರು. ಈ ವೇಳೆ ನಿರಾಲ ಉಗ್ರರಿಗೆ ತೀವ್ರ ಪ್ರತಿರೋಧ ತೋರಿದ್ದರು. ಲೈಟ್ ಮೆಷೀನ್ ಗನ್ ಹೊಂದಿದ್ದ ಕಾರ್ಪೋರಲ್ ನಿರಾಲಾ ಅವರು ಉಗ್ರರ ಮೇಲೆ ನಿರಂತರ ಗುಂಡಿನ ದಾಳಿ ನಡೆಸಿದರು. ಕಟ್ಟಡದಿಂದ ಉಗ್ರರು ಪರಾರಿಯಾಗಲು ಯತ್ನಿಸಿದ್ದರಾದರೂ, ಈ ಬಗ್ಗೆ ಮೊದಲೇ ಯೋಚಿಸಿದ್ದ ನಿರಾಲಾ ಉಗ್ರರ ಪರಾರಿಯ ಎಲ್ಲ ಮಾರ್ಗಗಳನ್ನು ತಡೆದಿದ್ದರು. ಈ ವೇಳೆ ಉಗ್ರರು ಆತ್ಮಾಹುತಿ ದಾಳಿ ಮುಂದಾಗಿದ್ದರು. ಒಂದು ವೇಳೆ ಉಗ್ರರ ಯೋಜನೆ ಫಲಿಸಿದ್ದೇ ಆಗಿದ್ದರೆ, ನಿರಾಲಾ ಜೊತೆಗಿದ್ದ ಹಲವು ಯೋಧರು ಸಾವನ್ನಪ್ಪುವ ಸಾಧ್ಯತೆ ಇತ್ತು. ಆದರೆ ಈ ಬಗ್ಗೆ ಅರಿತಿದ್ದ ಕಮಾಂಡೋ ನಿರಾಲಾ ಅತ್ಯುನ್ನತ ಶೌರ್ಯ ಪ್ರದರ್ಶನ ಮಾಡಿದರು.