ಮುಂಬೈ: 'ಸಂವಿಧಾನ ರಕ್ಷಿಸಿ' ಜಾಥಾ ಹಿನ್ನೆಲೆಯಲ್ಲಿ 69ನೇ ಗಣರಾಜ್ಯೋತ್ಸವ ದಿನದಂದೇ ಪ್ರತಿಪಕ್ಷಗಳ ನಾಯಕರಾದ ಶರದ್ ಪವಾರ್, ಶರದ್ ಯಾದವ್, ಒಮರ್ ಅಬ್ದುಲ್ಲಾ, ಡಿ ರಾಜಾ, ಹಾರ್ದಿಕ್ ಪಟೇಲ್ ಮತ್ತು ಸುಶಿಲ್ ಕುಮಾರ್ ಶಿಂಧೆ ಅವರು ಶುಕ್ರವಾರ ಮುಂಬೈನಲ್ಲಿ ಸಭೆ ನಡೆಸಿದರು.
ಇಂದು ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರ ಪ್ರತಿಪಕ್ಷ ನಾಯಕ ರಾಧಾಕೃಷ್ಣ ವಿ ಪಾಟೀಲ್ ಅವರ ಅಧಿಕೃತ ನಿವಾಸದಲ್ಲಿ ಪ್ರತಿಪಕ್ಷ ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಎನ್ ಸಿಪಿ ನಾಯಕರಾದ ನಾಯಕರಾದ ಪ್ರಫುಲ್ ಪಟೇಲ್, ಡಿ.ಪಿ.ತ್ರಿಪಾಠಿ ಹಾಗು ಮಾಜಿ ಸಂಸದ ರಾಮ್ ಜೇಠ್ಮಲಾನಿ ಸಭೆಯಲ್ಲಿ ಭಾಗವಹಿಸಿದ್ದರು. ತೃಣಮೂಲ ಕಾಂಗ್ರೆಸ್ ಪರವಾಗಿ ಮಾಜಿ ರೈಲ್ವೆ ಸಚಿವ ತ್ರಿವೇದಿ ಅವರು ಭಾಗವಹಿಸಿದ್ದರು.
ಸಂವಿಧಾನ ರಕ್ಷಿಸಿ ಜಾಥಾದಂಗವಾಗಿ ಬಿಜೆಪಿ ವಿರುದ್ಧ ಹಲವು ರಾಜಕೀಯ ಪಕ್ಷಗಳು ಒಂದಾಗಿ ಇಂದು ಒಗ್ಗಟ್ಟು ಪ್ರದರ್ಶಿಸಿದ್ದು, ಮುಂಬೈ ವಿಶ್ವವಿದ್ಯಾಲಯ ಸಮೀಪ ಇರುವ ಡಾ.ಬಿಆರ್ ಅಂಬೇಡ್ಕರ್ ಪ್ರತಿಮೆಯಿಂದ ಗೇಟ್ ವೇ ಆಫ್ ಇಂಡಿಯಾ ವರೆಗೆ ಸಂವಿಧಾನ ರಕ್ಷಿಸಿ ಜಾಥಾ ನಡೆಸುತ್ತಿದ್ದಾರೆ.
ಪ್ರತಿಪಕ್ಷಗಳ ಸಂವಿಧಾನ ರಕ್ಷಿಸಿ ಜಾಥಾಗೆ ಪ್ರತಿಯಾಗಿ ಮಹಾರಾಷ್ಟ್ರ ಬಿಜೆಪಿ ಘಟಕ ಇಂದು ಮುಂಬೈನಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಂಡಿದೆ.