ಮುಂಬೈ: 2008ರ ನವೆಂಬರ್ 26ರಂದು ನಡೆದಿದ್ದ ಮುಂಬೈ ದಾಳಿ ವೇಳೆ ಹುತಾತ್ಮರಾಗಿದ್ದ ಮುಂಬೈ ಮಾಜಿ ಭಯೋತ್ಪಾದನಾ ನಿಯಂತ್ರಣ ದಳದ ಮುಖ್ಯಸ್ಥ ಹೇಮಂತ್ ಕಾರ್ಕರೆ ಸಾವಿನ ತನಿಖೆಗೆ ಆದೇಶಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ಬಿಹಾರ ಮಾಜಿ ಶಾಸಕ ರಾದಾಕಾಂತ್ ಯಾದವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಜಿ. ಧರ್ಮಾಧಿಕಾರಿ ಮತ್ತು ಭಾರ್ತಿ ದಂಗ್ರಿ ಅವರಿದ್ದ ಪೀಠ, ಇದರಲ್ಲಿ ಸತ್ಯಾಂಶವೇನಿಲ್ಲಾ ತನಿಖೆಗೆ ಆದೇಶಿಸುವುದಿಲ್ಲ ಎಂದು ಹೇಳಿದೆ.
ಪಾಕಿಸ್ತಾನ ಉಗ್ರ ಅಜ್ಮಲ್ ಕಸಬ್ ಹಾಗೂ ಅಬು ಇಸ್ಮಾಯಿಲ್ ಅವರಿಂದ ಹೇಮಂತ್ ಕಾರ್ಕರೆ , ಹತ್ಯೆಯಾಗಿಲ್ಲ , ಬಲಪಂಥೀಯ ಗುಂಪಿನಿಂದ ಹತ್ಯೆಯಾಗಿದ್ದಾರೆ ಎಂದು ಆರೋಪಿಸಿ ಯಾದವ್ 2010ರಲ್ಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
2008ರಲ್ಲಿ ಸಂಭವಿಸಿದ್ದ ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿನವ್ ಭರತ್ ಸೇರಿದಂತೆ ಹಲವು ಮಂದಿ ಬಲಪಂಥೀಯ ಸಂಘಟನೆಯ ಸದಸ್ಯರನ್ನು ಹೇಮಂತ್ ಕಾರ್ಕರೆ ಬಂಧಿಸಿದ್ದರು ಈ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಗಿದ್ದು, ಈ ಬಗ್ಗೆ ವಿಶೇಷ ತನಿಖೆ ನಡೆಯಲು ಆದೇಶಿಸಬೇಕೆಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.
ಮುಂಬೈ ದಾಳಿ ವೇಳೆ ಕಸಬ್ ತಮ್ಮ ಸಹಚರರೊಂದಿಗೆ ನಡೆಸಿದ ಗುಂಡಿನ ದಾಳಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಅಶೋಕ್ ಕಾಮ್ಟೆ , ವಿಜಯ್ ಸಾಲಸ್ಕರ್ ಅವರೊಂದಿಗೆ ಹೇಮಂತ್ ಕಾರ್ಕರೆ ಹುತಾತ್ಮರಾಗಿದ್ದರು.
Advertisement