ದೇಶ
ಜೀವ ಬೆದರಿಕೆಗೆ ಹೆದರಲ್ಲ: ದೇಶದಲ್ಲಿ ಮೊದಲ ಬಾರಿಗೆ ನಮಾಜ್ ನೇತೃತ್ವ ವಹಿಸಿದ್ದ ಜಮಿತಾ ಮಾತು!
ದೇಶದಲ್ಲಿ ಮೊದಲ ಬಾರಿಗೆ ನಮಾಜ್(ಜುಮಾ) ನೇತೃತ್ವ ವಹಿಸಿದ್ದ ಕೇರಳ ಮೂಲದ ಜಮಿತಾಗೆ ಜೀವ ಬೆದರಿಕೆ ಸಂದೇಶಗಳು ಬರುತ್ತಿವೆಯಂತೆ...
ಮಲಪ್ಪುರಂ(ಕೇರಳ): ದೇಶದಲ್ಲಿ ಮೊದಲ ಬಾರಿಗೆ ನಮಾಜ್(ಜುಮಾ) ನೇತೃತ್ವ ವಹಿಸಿದ್ದ ಕೇರಳ ಮೂಲದ ಜಮಿತಾಗೆ ಜೀವ ಬೆದರಿಕೆ ಸಂದೇಶಗಳು ಬರುತ್ತಿವೆಯಂತೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇಮಾಮ್ ಹಾಗೂ ಕುರಾನ್ ಸುನ್ನತ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆಗಿರುವ 34 ವರ್ಷದ ಜಮಿತಾ ಅವರು ಪ್ರತಿ ಬಾರಿ ಪುರುಷ ಧರ್ಮ ಗುರುಗಳೇ ನಡೆಸಿಕೊಡುವ ಜುಮಾವನ್ನು ನಡೆಸಿಕೊಟ್ಟಿದ್ದು ಈ ಹಿನ್ನೆಲೆಯಲ್ಲಿ ಅವರಿಗೆ ಜೀವ ಬೆದರಿಕೆ ಸಂದೇಶಗಳು ಬರುತ್ತಿದ್ದು ಇದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದು ಜಮಿತಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಸಂದೇಶಗಳನ್ನು ಪೋಸ್ಟ್ ಮಾಡಿರುವ ಕಿಡಿಕೇಡಿಗಳು, ನಾನು ಬದುಕಲು ಅನರ್ಹ. ನಾನು ಇಸ್ಲಾಂನ್ನು ನಾಶಪಡಿಸುತ್ತಿದ್ದೇನೆ ಹೀಗಾಗಿ ನನ್ನನ್ನು ಜೀವಂತವಾಗಿ ಸುಟ್ಟುಹಾಕುತ್ತೇವೆ ಎಂಬ ಪೋಸ್ಟ್ ಗಳು ಬರುತ್ತಿವೆ ಎಂದು ಜಮಿತಾ ಸುದ್ದಿ ಸಂಸ್ಧೆಯೊಂದಕ್ಕೆ ತಿಳಿಸಿದ್ದಾರೆ.
ಜನವರಿ 26ರಂದು ಸುಮಾರು 80 ಮಂದಿ ಭಾಗವಹಿಸಿದ್ದ ಪ್ರಾರ್ಥನಾ ಸಭೆಯ ನೇತೃತ್ವವನ್ನು ಜಮಿತಾ ವಹಿಸಿಕೊಂಡಿದ್ದರು. ಮಹಿಳೆಯೊಬ್ಬರು ಶುಕ್ರವಾರದ ಪ್ರಾರ್ಥನೆ ನೇತೃತ್ವ ವಹಿಸಿರುವುದು ಕೇರಳ ಸೇರಿ ಇಡೀ ರಾಷ್ಟ್ರದ ಇಸ್ಲಾಂ ಅನುಯಾಯಿಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.