ನವದೆಹಲಿ: ಸಿಗರೇಟ್ ಕಳ್ಳಸಾಗಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ಸರ್ಕಾರಕ್ಕೆ 13 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಖಿಲ ಭಾರತೀಯ ರೈತ ಸಂಘಟನೆಯ ಒಕ್ಕೂಟ ಹೇಳಿದೆ.
ಸಿಗರೇಟ್ ಉದ್ಯಮದ ಶೇ.25 ಕ್ಕಿಂತಲೂ ಹೆಚ್ಚು ಅಕ್ರಮ ಸಿಗರೇಟ್ ವ್ಯಾಪಾರ ನಡೆಯುತ್ತಿದ್ದು, ವಿಶ್ವದಲ್ಲಿ ಅಕ್ರಮ ಸಿಗರೇಟ್ ಮಾರಾಟ ನಡೆಯುತ್ತಿರುವ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂಬ ಮಾಹಿತಿಯನ್ನು ರೈತರ ಒಕ್ಕೂಟ ಬಹಿರಂಗಪಡಿಸಿದೆ.
ಸಿಗರೇಟ್ ಕಳ್ಳಸಾಗಣೆ ನಡೆಯುತ್ತಿರುವುದರಿಂದ ಸರ್ಕಾರಕ್ಕೆ 13 ಸಾವಿರ ಕೋಟಿಯಷ್ಟು ನಷ್ಟ ಉಂಟಾಗುತ್ತಿದ್ದು, ಸರ್ಕಾರ ಇದಕ್ಕೆ ತಕ್ಷಣೆವೇ ಕಡಿವಾಣ ಹಾಕಬೇಕೆಂದು ರೈತ ಸಂಘಟನೆಗಳು ಒತ್ತಾಯಿಸಿವೆ.
ಹಲವು ವರ್ಷಗಳಿಂದ ಆದಾಯ ಗುಪ್ತಚರ ಇಲಾಖೆ ದಾಳಿ ನಡೆಸಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಿಗರೇಟ್ ಗಳನ್ನು ಗಡಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಆದರೆ ಈ ವರೆಗೂ ಎಷ್ಟು ಪ್ರಮಾಣದಲ್ಲಿ ಸಿಗರೇಟ್ ಹಾಗೂ ತಂಬಾಕನ್ನು ವಶಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.