ಲಖನೌ: ಉತ್ತರ ಪ್ರದೇಶದ ಕಸ್ ಗಂಜ್ ಹಿಂಸಾಚಾರದಲ್ಲಿ ನಡೆದಿದ್ದ ಚಂದನ್ ಗುಪ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಮುಖ ಆರೋಪಿ ಸಲೀಮ್ ನ್ನು ಬಂಧಿಸಲಾಗಿದೆ ಎಂದು ಅಲೀಘರ್ ಐಜಿಒ ಸಂಜೀವ್ ಗುಪ್ತ ಹೇಳಿದ್ದಾರೆ. ಇದೇ ವೇಳೆ ಕಸ್ ಗಂಜ್ ಜಿಲ್ಲೆಯ ಗಡಿಯಲ್ಲಿರುವ ಮಿರ್ಹಾಚಿ ಪ್ರದೇಶದಲ್ಲಿ ಕಾಂಗ್ರೆಸ್ ನಿಯೋಗವನ್ನು ತಡೆಹಿಡಿಯಲಾಗಿದ್ದು, ಸೂಕ್ಷ್ಮ ಪ್ರದೇಶಗಳಿಗೆ ತೆರಳದಂತೆ ಕಾಂಗ್ರೆಸ್ ನಿಯೋಗಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕಸ್ ಗಂಜ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್ ಪಿ ಸಿಂಗ್ ಕಾಂಗ್ರೆಸ್ ನಿಯೋಗಕ್ಕೆ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಿದ್ದಾರೆ. ಕಸ್ ಗಂಜ್ ಹಿಂಸಾಚಾರದಲ್ಲಿ ಘರ್ಷಣೆ ಸಂಭವಿಸಿದ್ದಾಗ ಚಂದನ್ ಗುಪ್ತ ಎಂಬ ಯುವಕನನ್ನು ಹತ್ಯೆ ಮಾಡಲಾಗಿತ್ತು. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ 118 ಜನರನ್ನು ಬಂಧಿಸಲಾಗಿದೆ.