ಕೊಯಂಬತ್ತೂರು: ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯುವ ಉದ್ದೇಶದಿಂದ ತಮಿಳುನಾಡಿನ ಹಳ್ಳಿಯೊಂದರಲ್ಲಿ ವಿದ್ಯಾರ್ಥಿಗಳಿಗೆ ಒಂದು ಗ್ರಾಂ ಚಿನ್ನದ ನಾಣ್ಯ, ಐದು ಸಾವಿರ ರು. ನಗದು ಹಾಗೂ ಎರಡು ಜತೆ ಸಮವಸ್ತ್ರ ನೀಡಲಾಗುತ್ತಿದೆ.
ಕೊಯಂಬಂತ್ತೂರಿನ ಅಣ್ಣೂರ್ ಸಮೀಪದ ಕೊನ್ನಾರ್ ಪಾಳ್ಯಂ ಶಾಲೆಯಲ್ಲಿ ಕೇವಲ ಆರು ಮಕ್ಕಳಿದ್ದು, ಶಿಕ್ಷಕರು ತಮ್ಮ ಶಾಲೆಗೆ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಉತ್ತೇಜಿಸಲು ಮೊದಲ ಹತ್ತು ಮಕ್ಕಳಿಗೆ ಒಂದು ಗ್ರಾಂ ಚಿನ್ನದ ನಾಣ್ಯ, ಐದು ಸಾವಿರ ರುಪಾಯಿ ಜತೆಗೆ ಎರಡು ಜತೆ ಸಮವಸ್ತ್ರ ನೀಡಲು ಮುಂದಾಗಿದ್ದಾರೆ.
ಶಿಕ್ಷಕರ ಈ ವಿನೂತನ ಪ್ರಯತ್ನ ಫಲ ನೀಡಿದ್ದು, ಹೊಸದಾಗಿ ಮೂವರು ವಿದ್ಯಾರ್ಥಿಗಳು ಶಾಲೆ ಸೇರಿದ್ದಾರೆ ಮತ್ತು ಇನ್ನು ಮೂವರು ವಿದ್ಯಾರ್ಥಿಗಳು ಆಸಕ್ತಿ ತೋರಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ರಾಜೇಶ್ ಚಂದ್ರಕುಮಾರ್ ವೈ ಅವರು ತಿಳಿಸಿದ್ದಾರೆ.
ಅತಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚಲು ತಮಿಳುನಾಡು ಸರ್ಕಾರ ಚಿಂತನೆ ನಡೆಸಿದ್ದು, ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾರಣ ಅದನ್ನು ಮುಚ್ಚುವ ಭೀತಿ ಎದುರಾಗಿದೆ.