ನವದೆಹಲಿ: ಟ್ಯುಟಿಕೋರಿನ್ ನಲ್ಲಿ ಸ್ಟೈರ್ಲೈಟ್ ತಾಮ್ರದ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂಬ ತಮಿಳುನಾಡು ಸರ್ಕಾರದ ಆದೇಶವನ್ನು ಪ್ರಶ್ನಿಸಿ ವೇದಾಂತ ಲಿಮಿಟೆಡ್ ಸಲ್ಲಿಸಿದ್ದ ಮನವಿ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ತಮಿಳುನಾಡು ಸರ್ಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಪ್ರತಿಕ್ರಿಯೆ ಕೋರಿದೆ.
ಹಂಗಾಮಿ ಎನ್ ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಜಾವದ್ ರಹಿಮ್ ಇಂದು ರಾಜ್ಯ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೊಟೀಸ್ ಕಳುಹಿಸಿದ್ದು ಜುಲೈ 18ರೊಳಗೆ ಪ್ರತಿಕ್ರಿಯೆ ನೀಡುವಂತೆ ಹೇಳಿದೆ. ಅಲ್ಲದೆ ವೇದಾಂತ ಮನವಿಯ ಸಮರ್ಥನೀಯವನ್ನು ಪ್ರಶ್ನೆ ಮಾಡುವ ಹೇಳಿಕೆಯನ್ನು ಸಲ್ಲಿಸುವ ಅವಕಾಶವನ್ನು ಕೂಡ ಹಸಿರು ನ್ಯಾಯಾಧೀಕರಣ ರಾಜ್ಯ ಸರ್ಕಾರಕ್ಕೆ ನೀಡಿದೆ.
ತೀವ್ರ ಮಾಲಿನ್ಯ ಉಂಟುಮಾಡುತ್ತಿರುವ ಹಿನ್ನಲೆಯಲ್ಲಿ ಜನರ ಪ್ರತಿಭಟನೆಯಿಂದಾಗಿ ವೇದಾಂತ ಲಿಮಿಟೆಡ್ ನ ತಾಮ್ರದ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ತಮಿಳುನಾಡು ಸರ್ಕಾರ ಆದೇಶ ನೀಡಿತ್ತು. ಕಾರ್ಯನಿರ್ವಹಣೆ ನವೀಕರಣ ಕೋರಿ ಕಳೆದ ಏಪ್ರಿಲ್ ನಲ್ಲಿ ವೇದಾಂತ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ, ಕಂಪೆನಿ ನಿರ್ದಿಷ್ಟ ಷರತ್ತುಗಳನ್ನು ಈಡೇರಿಸಿಲ್ಲ ಎಂದು ತಿಳಿಸಿತ್ತು. ಈ ಸಂಬಂಧ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಕಳೆದ ತಿಂಗಳು 28ರಂದು ಸರ್ಕಾರ ಆದೇಶ ನೀಡಿತ್ತು.
Advertisement