ಕೊಲೆ ಆರೋಪಿಗಳಿಗೆ ಹಾರ ಹಾಕಿದ ಜಯಂತ್ ಸಿನ್ಹಾ; ವಿವಾದಕ್ಕೀಡಾಗಿ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ

ಕೇಂದ್ರ ಸಚಿವ ಜಯಂತ್ ಸಿನ್ಹಾ ಕೊಲೆ ಆರೋಪಿಗಳಿಗೆ ಹಾರ ಹಾಕುವ ಮೂಲಕ ವಿವಾದಕ್ಕೀಡಾಗಿದ್ದು, ಸಿನ್ಹಾ ಕೃತ್ಯಕ್ಕೆ ಎಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ರಾಂಚಿ: ಕೇಂದ್ರ ಸಚಿವ ಜಯಂತ್ ಸಿನ್ಹಾ ಕೊಲೆ ಆರೋಪಿಗಳಿಗೆ ಹಾರ ಹಾಕುವ ಮೂಲಕ ವಿವಾದಕ್ಕೀಡಾಗಿದ್ದು, ಸಿನ್ಹಾ ಕೃತ್ಯಕ್ಕೆ ಎಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ದನಗಳ ವ್ಯಾಪಾರಿಯೊಬ್ಬರನ್ನು ಹೊಡೆದು ಸಾಯಿಸಿದ ಪ್ರಕರಣದ ಆರೋಪಿಗಳಿಗೆ ಹಾರ ಹಾಕಿ ಸನ್ಮಾನಿಸುವ ಮೂಲಕ ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ವಿವಾದಕ್ಕೀಡಾಗಿದ್ದಾರೆ. 2017ರ ಜೂನ್‌ ನಲ್ಲಿ ಜಾರ್ಖಂಡ್‌ ನ ಹಜಾರಿಭಾಗ್ ಜಿಲ್ಲೆಯ ರಾಮ್‌ ಘಡ್ ಪ್ರದೇಶದಲ್ಲಿ ದನಗಳ ವ್ಯಾಪಾರಿ ಅಲೀಮುದ್ದೀನ್ ಅನ್ಸಾರಿ ಅವರನ್ನು ಹೊಡೆದು ಸಾಯಿಸಲಾಗಿತ್ತು. ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಒಂದು ವರ್ಷದ ನಂತರ ಜೂನ್ 29ರಂದು ಜಾರ್ಖಂಡ್ ಹೈ ಕೋರ್ಟ್ 8 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು. ಜೈಲಿನಿಂದ ಜಾಮೀನಿನ ಬಿಡುಗಡೆಯಾದ ಇವರೆಲ್ಲರೂ ಸ್ಥಳಿಯ ಬಿಜೆಪಿ ನಾಯಕರೊಬ್ಬರ ಜತೆ ರಾಂಚಿಯ ಜಯಂತ್ ಸಿನ್ಹಾ ಅವರ ನಿವಾಸಕ್ಕೆ ಭೇಟಿ ಕೊಟ್ಟಾಗ ಸಚಿವರು ಎಲ್ಲರನ್ನೂ ಹಾರ ಹಾಕಿ ಸ್ವಾಗತಿಸಿದ್ದಾರೆ. ಈ ಕುರಿತ ಭಾವಚಿತ್ರಗಳು ಇದೀಗ ವೈರಲ್ ಆಗುತ್ತಿದ್ದು, ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಜಯಂತ್ ಸಿನ್ಹಾಟ್ವೀಟ್ ಮೂಲಕ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಸಚಿವರು ಸರಣಿ ಟ್ವೀಟ್‌ಗಳ ಮೂಲಕ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
'ಹಿಂಸಾಚಾರ ಯಾವುದೇ ರೂಪದಲ್ಲಿದ್ದರೂ ಅದನ್ನು ಖಂಡಿಸುತ್ತೇನೆ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಕಾನೂನು ಸರ್ವ ಶ್ರೇಷ್ಟವಾಗಿವೆ. ಯಾವುದೇ ವ್ಯಕ್ತಿಯ ಕಾನುನು ಬದ್ಧ ಹಕ್ಕುಗಳನ್ನು ಉಲ್ಲಂಘಿಸುವ ವರ್ತನೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ಟ್ವೀಟ್ ಮಾಡಿದ್ದಾರೆ. 
ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ 8 ಮಂದಿ ನನ್ನ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ ಶುಭಾಶಯಗಳನ್ನು ಹೇಳಿದ್ದೆ. ಭವಿಷ್ಯದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ. ನಾನೊಬ್ಬ ಸಾರ್ವಜನಿಕ ಪ್ರತಿನಿಧಿಯಾಗಿದ್ದು ರಕ್ಷಣೆ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ನನ್ನ ನಿಲುವನ್ನು ನಾನು ಸ್ಪಷ್ಟಪಡಿಸಿದ್ದೇನೆ. ಕಾನೂನು ಕೈಗೆತ್ತಿಗೊಳ್ಳುವವರಿಗೆ ಶಿಕ್ಷೆಯಾಗಲಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com