ಉಧಂಪುರ: ಟೆಂಪೋ-ಟ್ರಂಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 13 ಅಮರನಾಥ ಯಾತ್ರಿಕರು ಗಾಯಗೊಂಡಿರುವ ಘಟನೆ ಉಧಂಪುರದ ಬಿರ್ಮಾ ಸೇತುವೆ ಬಳಿ ಗುರುವಾರ ನಡೆದಿದೆ.
ಅಮರನಾಥ ಯಾತ್ರಿಕರನ್ನು ಹೊತ್ತ ಟೆಂಪೋ ವೊಂದು ಬಿರ್ಮಾ ಸೇತುವೆ ಬಳಿ ತೆರಳುತ್ತಿತ್ತು. ಈ ವೇಳೆ ವೇಗವಾಗಿ ಬಂದ ಟ್ರಂಕ್ ವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ 13 ಯಾತ್ರಿಕರು ಗಾಯಗೊಂಡಿದ್ದಾರೆ.
ಗಾಯಗೊಂಡ ಯಾತ್ರಿಕರನ್ನು ಉಧಂಪುರ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು. 13 ಮಂದಿಯ ಪೈಕಿ ಮೂವರು ಯಾತ್ರಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಅಪಘಾತದ ಬಳಿಕ ಟೆಂಪೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಗಾಯಾಳುಗಳಿಗೆ ಅಗತ್ಯ ನೆರವುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಉಧಂಪುರದ ಜಿಲ್ಲಾ ಕಲೆಕ್ಟರ್ ಹಾಗೂ ಆಡಳಿತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಗಾಯಗೊಂಡಿರುವ ಎಲ್ಲಾ ಯಾತ್ರಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. ಗಾಯಾಳುಗಳುಗಳಿಗೆ ಅಗತ್ಯ ನೆರವು ಗಳನ್ನು ನೀಡುವಂತೆ ಸೂಚಿಸಲಾಗಿದೆ. ಗಾಯಾಳುಗಳು ಝಾನ್ಸಿ ಹಾಗೂ ಉತ್ತರಪ್ರದೇಶದ ಮೂಲದವರಾಗಿದ್ದಾರೆಂದು ತಿಳಿಸಿದ್ದಾರೆ.