ಭಾರತದ ಗುರುತುಪತ್ರಗಳು ವಿದೇಶಿಯರಿಗೆ ಪೌರತ್ವ ನೀಡುವುದಿಲ್ಲ: ಮದ್ರಾಸ್ ಹೈಕೋರ್ಟ್

ದೇಶಿಗರು ಭಾರತದ ಆಧಾರ್ ಕಾರ್ಡು, ಚಾಲನೆ ಪರವಾನಗಿ ಪತ್ರ, ವಿವಾಹ ನೋಂದಣಿ ದಾಖಲೆ...
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ಚೆನ್ನೈ: ವಿದೇಶಿಗರು ಭಾರತದ ಆಧಾರ್ ಕಾರ್ಡು, ಚಾಲನೆ ಪರವಾನಗಿ ಪತ್ರ, ವಿವಾಹ ನೋಂದಣಿ ದಾಖಲೆ ಮತ್ತು ಚುನಾವಣಾ ಗುರುತು ಪತ್ರ ಒದಗಿಸಿದರೂ ಸಹ ಭಾರತೀಯ ನಾಗರಿಕತ್ವ ಪಡೆಯಲು ಸಾಧ್ಯವಿಲ್ಲ, ಬೇರೆ ಸೂಕ್ತ ದಾಖಲೆ ಒದಗಿಸಬೇಕಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.

ಶ್ರೀಲಂಕಾದ ಮಹಿಳೆ ಜಯಂತಿಯವರ ಪುತ್ರಿ ದಿವ್ಯಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಧೀಶ ಟಿ ರಾಜಾ ಈ ಆದೇಶ ಹೊರಡಿಸಿದ್ದಾರೆ.

ಜಯಂತಿ ಕಳೆದ 19ರಂದು ಚೆನ್ನೈಯ ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದರು. ಇವರು 1989ರಲ್ಲಿ ಶ್ರೀಲಂಕಾದಲ್ಲಿ ಜನಾಂಗೀಯ ಸಮಸ್ಯೆಯಿಂದಾಗಿ ತಮಿಳುನಾಡಿಗೆ ವಲಸೆ ಹೋಗಿದ್ದರು. ತಮಿಳುನಾಡಿನಲ್ಲಿ ಎಸ್ಎಸ್ಎಲ್ ಸಿಯವರೆಗೆ ಅಧ್ಯಯನ ಮಾಡಿ 1991ರಲ್ಲಿ ಭಾರತೀಯ ಪ್ರೇಮ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ಮದುವೆ ನೋಂದಣಿ ಕೂಡ ಆಗಿತ್ತು. ಮೂವರು ಮಕ್ಕಳನ್ನು ಹಡೆದು ಆಧಾರ್ ಕಾರ್ಡು, ಡ್ರೈವಿಂಗ್ ಲೈಸೆನ್ಸ್ ಮತ್ತು ಚುನಾವಣಾ ಗುರುತು ಪತ್ರವನ್ನು ಸಹ ಪಡೆದಿದ್ದರು.

2004ರಲ್ಲಿ ಪಾಸ್ ಪೋರ್ಟ್ ಗೆ ಅರ್ಜಿ ಹಾಕಿದ್ದ ಜಯಂತಿ 2007ರಲ್ಲಿ ಇಟೆಲಿಗೆ ಹೋದರು. ಅಲ್ಲಿ ಮನೆಗೆಲಸಕ್ಕೆ ಸೇರಿದ್ದರು. ಸ್ವಲ್ಪ ಸಮಯ ಕಳೆದು ತಮಿಳುನಾಡಿಗೆ ಬಂದು ನೆಲೆಸಿ ಮತ್ತೆ ಇಟೆಲಿಗೆ ಹೋಗಿದ್ದರು. ಇಲ್ಲಿನ ವಲಸೆ ಅಧಿಕಾರಿಗಳಿಂದ ಅವರಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ.

ಹೀಗೆ ಕಳೆದ ಜೂನ್ 22ರಂದು ಚೆನ್ನೈಗೆ ಇಟೆಲಿಯಿಂದ ಬರುತ್ತಿದ್ದಾಗ ಅರಿಗ್ನಾರ್ ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಜಯಂತಿ ಅವರನ್ನು ವಶಕ್ಕೆ ಪಡೆದುಕೊಂಡರು. ಅವರು ಶ್ರೀಲಂಕಾದಲ್ಲಿ ಜನಿಸಿ ಭಾರತದ ಪಾಸ್ ಪೋರ್ಟ್ ನ್ನು ವಂಚನೆಯಿಂದ ಪಡೆದಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದರು. ಅಲ್ಲದೆ 1989ರ ಅಕ್ಟೋಬರ್ 12ರಂದು ನೀಡಿದ್ದ ಶ್ರೀಲಂಕಾ ಪಾಸ್ ಪೋರ್ಟ್ ನ್ನು ಹೊಂದಿದ್ದಾರೆ, ಅದು 1994ರ ಅಕ್ಟೋಬರ್ 11ರಂದು ಅವಧಿ ಮುಗಿದಿತ್ತು.

ವಶಕ್ಕೆ ಪಡೆದ ಅಧಿಕಾರಿಗಳು ಭಾರತಕ್ಕೆ ಪ್ರವೇಶಿಸುವುದಕ್ಕೆ ನಿರಾಕರಿಸಿದ್ದು ಮಾತ್ರವಲ್ಲದೆ ಶ್ರೀಲಂಕಾಗೆ ವಾಪಸ್ ಕಳುಹಿಸಿದರು. ಆದರೆ ಆಕೆ ಭಾರತದ ಪ್ರಜೆ ಎಂದು ಹೇಳಿದ ಕಾರಣ ಶ್ರೀಲಂಕಾ ಅಧಿಕಾರಿಗಳು ಅದೇ ದಿನ ಭಾರತಕ್ಕೆ ಕಳುಹಿಸಿದರು. ಜೂನ್ 24ರಂದು ಮತ್ತೊಮ್ಮೆ ಭಾರತ ಅಧಿಕಾರಿಗಳು ಶ್ರೀಲಂಕಾಗೆ ವಾಪಸ್ ಕಳುಹಿಸಿದರು. ಆದರೆ ಶ್ರೀಲಂಕಾ ಅಧಿಕಾರಿಗಳು ಆಗಮ ಕ್ಲಿಯರೆನ್ಸ್ ಯನ್ನು ಜಯಂತಿಗೆ ನೀಡಲಿಲ್ಲ ಮತ್ತು ಮತ್ತೆ ಶ್ರೀಲಂಕಾಗೆ ಕಳುಹಿಸುವಂತೆ ಭಾರತದ ವಲಸೆ ಅಧಿಕಾರಿಗಳಿಗೆ ಸೂಚಿಸಿದರು. ಅವರಿಗೆ ಚೆನ್ನೈಯಲ್ಲಿರುವ ಶ್ರೀಲಂಕಾದ ಡೆಪ್ಯುಟಿ ಹೈ ಕಮಿಷನ್ ತುರ್ತು ಪ್ರಯಾಣ ದಾಖಲೆಗಳನ್ನು ಬಿಡುಗಡೆ ಮಾಡಿತ್ತು.

ಈ ಹಿನ್ನಲೆಯಲ್ಲಿ ಜೂನ್ 24ರಂದು ವಿದೇಶಿ ಪ್ರಾದೇಶಿಕ ದಾಖಲಾತಿ ಅಧಿಕಾರಿ ಆದೇಶ ಹೊರಡಿಸಿ ವಿದೇಶಿ ಕಾಯ್ದೆ 1946ರಡಿಯಲ್ಲಿ ಭಾರತಕ್ಕೆ ಪ್ರಯಾಣಿಸದಂತೆ ಮತ್ತು ಶ್ರೀಲಂಕಾಗೆ ಹಿಂತಿರುಗುವಂತೆ ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರ ಪುತ್ರಿ ದಿವ್ಯಾ ಚೆನ್ನೈ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ತಮ್ಮ ತಾಯಿಯನ್ನು ಇಟೆಲಿಗೆ ಹಿಂತಿರುಗಿಸಿ ಕೆಲಸಕ್ಕೆ ಸೇರಲು ಅನುವು ಮಾಡಿಕೊಡಲು ಅವಕಾಶ ನೀಡಬೇಕೆಂದು ಕೋರಿದ್ದರು.

ಆದರೆ ಜಯಂತಿಯವರು ಸಲ್ಲಿಸಿರುವ ದಾಖಲೆಗಳಲ್ಲಿ ಸುಳ್ಳು ಇದೆ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ವಾದ ಮಂಡಿಸಿದರು. ಶ್ರೀಲಂಕಾದಲ್ಲಿ ಹುಟ್ಟಿ ಭಾರತೀಯ ನಾಗರಿಕತೆಯನ್ನು ವಂಚನೆಯಿಂದ ಪಡೆದಿದ್ದಾರೆ ಅವರಿಗೆ ಪಾಸ್ ಪೋರ್ಟ್ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದರು. ಅಲ್ಲದೆ ಅವರು 1989ರಲ್ಲಿ ಪಡೆದಿದ್ದ ಶ್ರೀಲಂಕಾ ಪಾಸ್ ಪೋರ್ಟ್ 1994ರಲ್ಲಿ ಕಲಾವಧಿ ಮುಗಿದಿತ್ತು. ಪಾಸ್ ಪೋರ್ಟ್ ನಲ್ಲಿ ಅವರ ಹೆಸರು ಸಯಂತಿ ಆನಂದರಾಜ್ ಎಂಬುದಾಗಿತ್ತು.

ಅಡಿಷನಲ್ ಸಾಲಿಸಿಟರ್ ಜನರಲ್ ಅವರ ವಾದ ಆಲಿಸಿದ ನ್ಯಾಯಾಧೀಶ ರಾಜಾ ಅದನ್ನು ಪುರಸ್ಕರಿಸಿದರು. ಪಾಸ್ ಪೋರ್ಟ್ ನಲ್ಲಿ ಜಯಂತಿಯ ಹೆಸರು ಬೇರೆಯದಾಗಿದ್ದು ಅವರು 1973ರಲ್ಲಿ ಶ್ರೀಲಂಕಾದಲ್ಲಿ ಜನಿಸಿದ್ದು ಅಲ್ಲಿನ ಪ್ರಜೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಹೀಗಾಗಿ ನಾಗರಿಕತ್ವ ಕಾಯ್ದೆ ಸೆಕ್ಷನ್ 5(1)(ಸಿ)ಯಡಿಯಲ್ಲಿ ಜಯಂತಿಯವರನ್ನು ಭಾರತೀಯ ಪ್ರಜೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com