ನವದೆಹಲಿ: ದೆಹಲಿಯ ಬುರಾರಿಯಲ್ಲಿ 11 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದ ಮನೆಯಿಂದ ರಕ್ಷಿಸಲ್ಪಟ್ಟಿದ್ದ ಏಕೈಕ ಜೀವ ಭಾನುವಾರ ಸಂಜೆ ಹೃದಯಾಘಾತದಿಂದ ಸಾವಿಗೀಡಾಗಿದೆ.
ಬುರಾರಿಯ ಮನೆಯಿಂದ 6 ವರ್ಷದ ಟಾಮಿ ಎಂಬ ಹೆಸರಿನ ನಾಯಿಯನ್ನು ರಕ್ಷಿಸಲಾಗಿತ್ತು. ಟಾಮಿಯನ್ನು ರಕ್ಷಿಸಿದಾಗ ಅದು 108 ಡಿಗ್ರಿಯಷ್ಟು ತೀವ್ರ ಜ್ವರ ಮತ್ತು ಹಸಿವಿನಿಂದ ಬಳಲುತ್ತಿತ್ತು. ಕೂಡಲೇ ಟಾಮಿಯನ್ನು ನೋಯ್ಡಾ ಬಳಿಯ ಪ್ರಾಣಿಗಳ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಟಾಮಿಯ ಪಾಲನೆಯ ಜವಾಬ್ದಾರಿಯನ್ನು ಹೌಸ್ ಆಫ್ ಸ್ಟ್ರೇ ಅನಿಮಲ್ಸ್ ಎಂಬ ಪ್ರಾಣಿ ಪಾಲನಾ ಸಂಸ್ಥೆಯ ಮುಖ್ಯಸ್ಥ, ಪ್ರಾಣಿ ಹಕ್ಕುಗಳ ಹೋರಾಟಗಾರ ಸಂಜಯ್ ಮಹೋಪಾತ್ರ ವಹಿಸಿಕೊಂಡಿದ್ದರು.
ಇಂದು ಬೆಳಗ್ಗೆ ಟಾಮಿ ಚಟುವಟಿಕೆಯಿಂದಲೇ ಇತ್ತು. ವಾಕಿಂಗ್ ಗೆ ಕೂಡ ಹೊರಗೆ ಕರೆದೊಯ್ಯಲಾಗಿತ್ತು. ಮರಳಿ ಕರೆತರುವಾಗ ಟಾಮಿ ಕುಸಿದು ಬಿದ್ದ. ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಟಾಮಿ ಕೊನೆಯುಸಿರೆಳೆಯಿತು ಎಂದು ಮಹೋಪಾತ್ರ ತಿಳಿಸಿದ್ದಾರೆ.