ದೇಶ
'ಹಫೀಜ್ ಸಯ್ಯೀದ್ ಓರ್ವ ಉಗ್ರ, ಇಂತಹವರಿಂದಲೇ ಪಾಕಿಸ್ತಾನ ಪ್ರಜಾಪ್ರಭುತ್ವ ಅಪಾಯದಲ್ಲಿದೆ'
ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ಓರ್ವ ಉಗ್ರಗಾಮಿ. ಆತನ ಬೆಂಬಲಿಗರು ಪಾಕಿಸ್ತಾನ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ನಿಜಕ್ಕೂ ಕಳವಳಕಾರಿ. ಇಂತಹವರಿಂದಲೇ ಪಾಕಿಸ್ತಾನ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೇಂದ್ರ ಸಚಿವ ಹಂಸರಾಜ್ ಅಹಿರ್ ಹೇಳಿದ್ದಾರೆ.
ನವದೆಹಲಿ: ಲಷ್ಕರ್ ಇ ತೊಯ್ಬಾದ ಕಮಾಂಡರ್, ಜಮಾತ್ ಉದ್ ದವಾ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ಓರ್ವ ಉಗ್ರಗಾಮಿ. ಆತನ ಬೆಂಬಲಿಗರು ಪಾಕಿಸ್ತಾನ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ನಿಜಕ್ಕೂ ಕಳವಳಕಾರಿ. ಇಂತಹವರಿಂದಲೇ ಪಾಕಿಸ್ತಾನ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೇಂದ್ರ ಸಚಿವ ಹಂಸರಾಜ್ ಅಹಿರ್ ಹೇಳಿದ್ದಾರೆ.
ಇಂದು ಪಾಕಿಸ್ತಾನದಾದ್ಯಂತ ನಡೆಯುತ್ತಿರುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಮತದಾನದ ಹಿನ್ನಲೆಯಲ್ಲಿ ಸಂಸತ್ ಭವನದ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹಂಸರಾಜ್ ಅಹಿರ್ ಅವರು, ಮುಂಬೈ ದಾಳಿಯ ರೂವಾರಿ ಹಫೀಜ್ ಸಯ್ಯೀದ್ ಪಾಕಿಸ್ತಾನ ಚುನಾವಣೆಯಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಕಳವಳಕಾರಿ. ಆತ ಓರ್ವ ಉಗ್ರಗಾಮಿ. ಇಂತಹವರಿಂದಲೇ ಪಾಕಿಸ್ತಾನ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಹಿಂದೆ ಇದೇ ಹಫೀಜ್ ಸಯ್ಯೀದ್ ನನ್ನು ಜಾಗತಿಕ ಉಗ್ರಗಾಮಿ ಎಂದು ಘೋಷಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹಿಸಿತ್ತು. ಆದರೆ ಚೀನಾ ಮತ್ತು ಪಾಕಿಸ್ತಾನ ದೇಶಗಳ ಕುತಂತ್ರದಿಂದಾಗಿ ಭಾರತದ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು. ಇದೀಗ ಇದೇ ಹಫೀಜ್ ಸಯ್ಯೀದ್ ಪಾಕಿಸ್ತಾನದ ಸ್ಥಳೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ತನ್ನ ಉಗ್ರ ಸಂಘಟನೆಯ ಕೆಲವರನ್ನು ಪಾಕಿಸ್ತಾನ ಚುನಾವಣೆಯ ಕಣಕ್ಕಿಳಿಸಿದ್ದಾನೆ. ಅಲ್ಲದೆ ತನ್ನ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಾಗ ಭಾರತವನ್ನು ಸರ್ವನಾಶ ಮಾಡುವ ಹೇಳಿಕೆ ನೀಡಿದ್ದ.
ಇಂದು ನಡೆಯುತ್ತಿರುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಉಗ್ರ ಹಫೀಜ್ ಸಯ್ಯೀದ್ ಲಾಹೋರ್ ನಲ್ಲಿ ತನ್ನ ಮತಚಲಾವಣೆ ಮಾಡಿದ್ದಾನೆ, ಉಳಿದಂತೆ ಪಿಎಂಎಲ್ ನ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಸಹೋದರ ಶೆಹಬಾಜ್ ಶರೀಫ್ ಅವರು ಇಸ್ಲಾಮಾಬಾದ್ ನಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನವಾಬ್ ಶಾ ನಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರಿಯರಾದ ಬಕ್ತಾವಾರ್ ಭುಟ್ಟೋ ಮತ್ತು ಆಸೀಫಾ ಭುಟ್ಟೋ ತಮ್ಮ ಹಕ್ಕು ಚಲಾಯಿಸಿದರು. ಅಂತೆಯೇ ಭುಟ್ಟೋ ಪುತ್ರ ಬಿಲಾವಲ್ ಭುಟ್ಟೋ ಜರ್ದಾರಿ ಅವರೂ ಕೂಡ ತಮ್ಮ ಹಕ್ಕ ಚಲಾಯಿಸಿ ಮಾಧ್ಯಮಗಳಿಗೆ ಪೋಸ್ ನೀಡಿದರು.