1999ರ ಮೇ 9ರಂದು ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ನುಗ್ಗಿ ಶೆಲ್ ದಾಳಿ ಮಾಡಲು ಪ್ರಾರಂಭಿಸಿತು.ಪಾಕ್ ಸೇನೆ ಮತ್ತು ಉಗ್ರರ ಉಪಟಳವನ್ನು ಸಹಿಸಿಕೊಂಡಿದ್ದ ಭಾರತೀಯ ಸೇನೆ ಸರ್ಕಾರದ ಆದೇಶದಂತೆ ಯೋಧರನ್ನು ಕಾರ್ಗಿಲ್ ಸೆಕ್ಟರ್ ಗೆ ಕಳುಹಿಸಿತ್ತು.
ಜಮ್ಮು-ಕಾಶ್ಮೀರದ ಕಾರ್ಗಿಲ್ ಮತ್ತು ಲಡಾಖ್ ನಲ್ಲಿ 1999ರವರೆಗೂ ಪಾಕಿಸ್ತಾನ ಸೇನೆಯ ಮತ್ತು ಒಳನುಸುಳುಕೋರರ ತೀವ್ರ ಉಪಟಳವಿತ್ತು. 1971ರಲ್ಲಿ ಭಾರತ-ಪಾಕ್ ನಡುವೆ ನಡೆದ ಬಾಂಗ್ಲಾದೇಶ ವಿಮೋಚನೆ ಯುದ್ಧದ ನಂತರ ಉಭಯ ದೇಶಗಳ ನಡುವೆ ನಡೆದ ಮೊದಲ ಯುದ್ಧ ಕಾರ್ಗಿಲ್ ಆಗಿತ್ತು. ಆಗ ಭಾರತದ ಪ್ರಧಾನಿಯಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ ಮತ್ತು ಪಾಕ್ ಪ್ರಧಾನಿಯಾಗಿದ್ದವರು ನವಾಜ್ ಷರೀಫ್.
ಕಾರ್ಗಿಲ್ ಗೆ ಪಾಕ್ ಸೇನೆ ಯೋಧರು ಮತ್ತು ಉಗ್ರರು ನುಗ್ಗಿ ಉಪಟಳ ಮಾಡುತ್ತಿದ್ದರು. ಯೋಧರು ಮತ್ತು ಉಗ್ರರನ್ನು ಹೊಡೆದೋಡಿಸಲು ಭಾರತಕ್ಕೆ ಯುದ್ಧ ಅನಿವಾರ್ಯವಾಗಿತ್ತು. 1999ರ ಮೇ ತಿಂಗಳಿನಿಂದ ಜುಲೈಯವರೆಗೆ 2 ತಿಂಗಳಿಗೂ ಹೆಚ್ಚು ಕಾಲ ಯುದ್ಧ ನಡೆಯಿತು. ಭಾರತ ಮುಖ್ಯವಾಗಿ 32,000 ಅಡಿ ಎತ್ತರ ಪ್ರದೇಶದಲ್ಲಿ ವಾಯುಪಡೆ ದಾಳಿ ನಡೆಸಿತು. ಆ ವರ್ಷ ಜುಲೈ 14ರಂದು ಭಾರತ ಕಾರ್ಗಿಲ್ ಯುದ್ಧದಲ್ಲಿ ಗೆದ್ದಿದೆ ಎಂದು ಹೇಳಿದರೂ ಕೂಡ ಅಧಿಕೃತವಾಗಿ ಘೋಷಣೆಯಾಗಿದ್ದು ಜುಲೈ 26ರಂದು.
ಯುದ್ಧದಲ್ಲಿ ಭಾರತೀಯ ಸೇನೆಯ ಸುಮಾರು 500 ಯೋಧರು ಮತ್ತು ಪಾಕಿಸ್ತಾನ ಸೇನೆಯ ಸುಮಾರು 3 ಸಾವಿರ ಯೋಧರು ಮತ್ತು ಉಗ್ರರು ಮೃತಪಟ್ಟಿದ್ದರು. ಕಾರ್ಗಿಲ್ ಎತ್ತರದ ಪ್ರದೇಶವಾಗಿದ್ದರಿಂದ ಇಲ್ಲಿನ ಕಡಿದಾದ ಬೆಟ್ಟ, ಗುಡ್ಡಗಳು ಮತ್ತು ನೈಸರ್ಗಿಕ ಅಡಚಣೆ ಮಧ್ಯೆ ಯುದ್ಧ ಮಾಡುವುದು ಕಠಿಣವಾಗಿತ್ತು.
ಆಧುನಿಕ ಭಾರತದ ಇತಿಹಾಸದಲ್ಲಿ ಕಾರ್ಗಿಲ್ ಯುದ್ಧ ಒಂದು ಮೈಲುಗಲ್ಲು. ಎಮೆರ್ಜೆಂಟ್ ಬ್ರಾಡ್ ಕಾಸ್ಟ್ ಜರ್ನಲಿಸಂ ಮೂಲಕ ದೂರದರ್ಶನದಲ್ಲಿ ಕಾರ್ಗಿಲ್ ಯುದ್ಧ ಪ್ರಸಾರವಾಗಿತ್ತು. ಪರಮಾಣು ಬಾಂಬುಗಳನ್ನು ಹೊಂದಿದ್ದ ಎರಡು ಅಣ್ವಸ್ತ್ರ ದೇಶಗಳಿಗೆ ಕಾರ್ಗಿಲ್ ಯುದ್ಧ ಪ್ರತಿಷ್ಠೆಯಾಗಿತ್ತು.
Advertisement