ಆಳ್ವಾರ್ ಗುಂಪು ಹತ್ಯೆ: ಆರೋಪಿಗಳಿಗೆ ಸಹಾಯದ ಭರವಸೆ ನೀಡಿದ್ದ ಬಿಜೆಪಿ ಶಾಸಕ

ಆಳ್ವಾರ್ ದ ವಿವಾದಾತ್ಮಕ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಅವರು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೈಪುರ್: ಆಳ್ವಾರ್ ದ ವಿವಾದಾತ್ಮಕ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಅವರು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು, ಗುಂಪು ಹತ್ಯೆ ಪ್ರಕರಣದ ಸಂತ್ರಸ್ಥರಾದ ಅಕ್ಬರ್ ಖಾನ್ ಹಾಗೂ ಆತನ ಸಹಾಯಕ ಅಸ್ಲಾಮ್ ಖಾನ್ ವಿರುದ್ಧ ಗೋವು ಕಳ್ಳಸಾಗಣೆ ಪ್ರಕರಣ ದಾಖಲಿಸುವಂತೆ ರಾಜಸ್ಥಾನ ಗೃಹ ಸಚಿವ ಗುಲಾಬ್ ಚಾಂದ್ ಕಠಾರಿಯ ಅವರಿಗೆ ಕೇಳಿಕೊಂಡಿದ್ದಾರೆ.
ಅಕ್ಬರ್ ಸಂಬಂಧಿಗಳ ವಿರುದ್ಧವೂ ಕಾನೂನು ಕ್ರಮಕ್ಕೆ ಮುಂದಾಗಿದ್ದ ಬಿಜೆಪಿ ಶಾಸಕ, ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಗೋರಕ್ಷಕರಿಗೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ.
ಅಕ್ಬರ್ ಹಸುಗಳನ್ನು ಖರೀದಿಸಿದ್ದರು ಎಂಬ ವಿಚಾರವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮೂರು ಬಾರಿ ಶಾಸಕರಾಗಿರುವ ಅಹುಜಾ, ಒಂದು ವೇಳೆ ಅವರು ಗೋವುಗಳನ್ನು ಖರೀಸಿದ್ದೆಯಾದರೆ ಮಧ್ಯರಾತ್ರಿ ಸಾಗಿಸುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಅಸ್ಲಾಮ್ ಮತ್ತು ಅಕ್ಬರ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ. ಅವರು ಗೋ ಕಳ್ಳಸಾಗಣೆ ಮಾಡುತ್ತಿಲ್ಲವಾದರೆ ರಾತ್ರಿ 12 ಗಂಟೆಗೆ ಅವುಗಳನ್ನು ಸಾಗಿಸುತ್ತಿರಲಿಲ್ಲ. ಹೀಗಾಗಿ ಪೊಲೀಸರು ಅವರ ಗೋವು ಕಳ್ಳಸಾಗಣೆ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ತಾವು ಕೋರ್ಟ್ ಮೊರೆ ಹೋಗುವುದಾಗಿ ಬಿಜೆಪಿ ಶಾಸಕ ಎಚ್ಚರಿಸಿದ್ದಾರೆ.
ತನ್ನ ಮೇಲೆ ಹಲ್ಲೆ ನಡೆಸಿದ ಏಳು ಗೋರಕ್ಷಕರು, ತಾವು ಎಂಎಲ್ಎ ಸಾಬ್ ಬೆಂಬಲಿಗರು. ತಮ್ಮನ್ನು ಯಾರೂ ಏನು ಮಾಡುವುದಿಲ್ಲ ಎನ್ನುತ್ತಿದ್ದರು ಎಂದು ಜುಲೈ 21ರಂದು ಅಕ್ಬರ್ ಪೊಲೀಸರಿಗೆ ಹೇಳಿಕೆ ನೀಡಿದ್ದ. ಆದರೆ ಅಕ್ಬರ್ ಹೇಳಿಕೆಯನ್ನು ತಳ್ಳಿಹಾಕಿದ ಅಹುಜಾ, ಅಕ್ಬರ್ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಎಂದಿದ್ದಾರೆ.
ಜುಲೈ 21ರಂದು ಅಕ್ಬರ್ ಖಾನ್ ಹಾಗೂ ಆತನ ಸ್ನೇಹಿತ ಅಸ್ಲಾಂ ಹರಿಯಾಣದಲ್ಲಿರುವ ತಮ್ಮ ಗ್ರಾಮಕ್ಕೆ ಎರಡು ದನಗಳನ್ನು ಕೊಂಡೊಯ್ಯುತ್ತಿದ್ದರು. ರಾಮಘರ್ ​ನಲ್ಲಿರುವ ಅರಣ್ಯ ಪ್ರದೇಶದ ಮಾರ್ಗವಾಗಿ ತೆರಳುವಾಗ ಗೋರಕ್ಷಕರು ಅವರ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಅಸ್ಲಾಂ ತಪ್ಪಿಸಿಕೊಂಡು ಪರಾರಿಯಾಗಿದ್ದ, ಆದರೆ, ಅಕ್ಬರ್​ ಖಾನ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೊದಲು ದನಗಳನ್ನು ಗೋಶಾಲೆಗೆ ಬಿಟ್ಟಿದ್ದರು. ಬಳಿಕ ಮೂರು ಗಂಟೆ ತಡವಾಗಿ ಗಾಯಾಳು ಅಕ್ಬರ್ ಖಾನ್ ನನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ದಾರಿ ಮಧ್ಯೆಯೇ ಅಕ್ಬರ್ ಖಾನ್ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com