ಚಂಡೀಗಢ: ರಾಜ್ಯದ ಕ್ರೀಡಾಪಟುಗಳು ತಮ್ಮ ವೇತನದ ಮೂರನೇ ಒಂದು ಭಾಗವನ್ನು ಕ್ರೀಡೆಯ ಬೆಳವಣಿಗೆಗೆ ಹರ್ಯಾಣ ಕ್ರೀಡಾ ಮಂಡಳಿಗೆ ನೀಡಬೇಕೆಂಬ ಸರ್ಕಾರದ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಹರ್ಯಾಣ ಮುಖ್ಯಮಂತ್ರಿ ಎಂ ಎಲ್ ಖಟ್ಟಾರ್ ತಿಳಿಸಿದ್ದಾರೆ.
ಈ ಕುರಿತು ಎಎನ್ಐಗೆ ಪ್ರತಿಕ್ರಿಯೆ ನೀಡಿರುವ ಅವರು, ಕ್ರೀಡಾ ಇಲಾಖೆಯ ಬಳಿ ಸಂಬಂಧಪಟ್ಟ ದಾಖಲೆಗಳನ್ನು ಕೇಳಿದ್ದು ಮುಂದಿನ ಆದೇಶಗಳವರೆಗೆ ಅಧಿಸೂಚನೆಯನ್ನು ತಡೆಹಿಡಿಯಬೇಕೆಂದು ಸೂಚಿಸಿದ್ದೇನೆ ಎಂದರು.
ನಮ್ಮ ರಾಜ್ಯದ ವೃತ್ತಿಪರ ಕ್ರೀಡಾಪಟುಗಳು ಸಾಕಷ್ಟು ಕೊಡುಗೆ ನೀಡಿದ್ದು ಎಲ್ಲಾ ವಿಷಯಗಳ ಕುರಿತು ಪರಿಶೀಲನೆ ನಡೆಸುವುದಾಗಿ ನಾನು ಭರವಸೆ ನೀಡಿದ್ದೇನೆ ಎಂದರು.
ಹರ್ಯಾಣದಲ್ಲಿ ಖ್ಯಾತ ಕ್ರೀಡಾಪಟುಗಳಾದ ಬಾಕ್ಸರ್ ವಿಜೇಂದರ್ ಸಿಂಗ್, ಅಖಿಲ್ ಕುಮಾರ್ ಇದ್ದು ಇಬ್ಬರೂ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿಎಸ್ ಪಿ ಆಗಿದ್ದಾರೆ. ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಮತ್ತು ಕುಸ್ತಿಪಟು ಗೀತಾ ಮತ್ತು ಬಬಿತಾ ಪೊಗಟ್ ಅವರು ಕೂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರಲ್ಲಿ ಬಬಿತಾ ಕಾಮನ್ ವೆಲ್ತ್ ಗೇಮ್ ನ ಗೋಲ್ಡ್ ಕೋಸ್ಟ್ ಪಂದ್ಯದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಸರ್ಕಾರದ ಈ ನಿರ್ಧಾರವನ್ನು ಅವರು ಅಸಹ್ಯಕರ ಎಂದು ಕರೆದಿದ್ದರು.
ಸರ್ಕಾರದ ಅಧಿಸೂಚನೆ ಕ್ರೀಡಾಪಟುವಿನ ತಯಾರಿ ಮೇಲೆ ಹೊಡೆತ ನೀಡುತ್ತದೆ. ಸರ್ಕಾರ ಇಂತಹ ಆದೇಶ ತರಲು ಹೇಗೆ ಸಾಧ್ಯ? ನಮ್ಮ ಆದಾಯದಲ್ಲಿ ಒಂದಷ್ಟು ಹಣವನ್ನು ತೆರಿಗೆ ರೂಪದಲ್ಲಿ ಕಟ್ಟುತ್ತೇವೆ. ಇದೀಗ ಆದಾಯದಲ್ಲಿ ಮೂರನೇ ಒಂದು ಭಾಗ ನೀಡಬೇಕೆಂದು ಕೇಳುವುದು ಸರಿಯಲ್ಲ ಎಂದಿದ್ದಾರೆ.
Advertisement