ಶ್ರೀನಗರ: ಪತ್ರಕರ್ತ ಶೂಜಕ್ ಬುಖಾರಿ ಹತ್ಯೆಯನ್ನು ಖಂಡಿಸಿ ಪ್ರತ್ಯೇಕತಾ ವಾದಿಗಳು ಕರೆ ನೀಡಿರುವ ಕಾಶ್ಮೀರ್ ಬಂದ್ ನಿಂದಾಗಿ, ಕಣಿವೆ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ರಾಜಧಾನಿ ಶ್ರೀನಗರ, ಉಗ್ರದಾಳಿ ಪೀಡಿತ ಪುಲ್ವಾಮ, ಕಾಶ್ಮೀರ ಸೇರಿದಂತೆ ಕಣಿವೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಬಿಸಿ ಮುಟ್ಟಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಬ್ದವಾಗಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು, ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ.
ಇನ್ನು ಬುಖಾರಿ ಹತ್ಯಾ ಪ್ರಕರಣದ ವಿಚಾರಣೆಯನ್ನು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ನಡೆಸಬೇಕು ಎಂದು ಪ್ರತ್ಯೇಕತಾ ವಾದಿಗಳು ಆಗ್ರಹಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಬಂದ್ ನಿಮಿತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ.
ಪತ್ರಕರ್ತ ಬುಖಾರಿ ಮತ್ತು ಆತನ ಇಬ್ಬರು ಗನ್ ಮ್ಯಾನ್ ಗಳನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದು ಹಾಕಿದ್ದರು. ದಾಳಿಯಲ್ಲಿ ಓರ್ವ ಸ್ಥಳೀಯ ಕೂಡ ಗಾಯಗೊಂಡಿದ್ದ.