ರಾಂಚಿ: ಬಿಜೆಪಿ ಸಂಸದ ಕರಿಯಾ ಮುಂಡಾ ಅವರ ನಿವಾಸದಿಂದ ಅಪಹರಣಕ್ಕೊಳಗಾಗಿದ್ದ ಮೂವರು ಜಾರ್ಖಂಡ್ ಪೊಲೀಸರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ.
ಅಪಹರಣಕ್ಕೊಳಗಾಗಿದ್ದ ಮೂವರು ತಾಪ್ರಾ ಪೊಲೀಸ್ ಠಾಣೆಗೆ ಇಂದು ಮುಂಜಾನೆ ಆಗಮಿಸಿದ್ದಾರೆ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.
ಖುಂಠಿ ಜಿಲ್ಲೆಯ ಅನಿಗಾಡಾ - ಚಂಡೀದೀಹ್ ನಲ್ಲಿನ ಬಿಜೆಪಿ ಸಂಸದ ಕರಿಯಾ ಮುಂಡ ಅವರ ನಿವಾಸದಿಂದ ಅಪಹೃತರಾಗಿ ಬಳಿಕ ಪಾರುಗೊಳಿಸಲ್ಪಟ್ಟ ಮೂವರು ಪೊಲೀಸ್ ಸಿಬಂದಿಗಳಾದ ವಿನೋದ್ ಕರ್ಕೆಟ್ಟಾ, ಸಿಯೋನ್ ಸುರಿನ್ ಮತ್ತು ಸುಬೋಧ್ ಕುಜೂರ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಇವರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಬರಮಾಡಿಕೊಂಡರು. ಆದರೆ ಅಪಹೃತ ಪೊಲೀಸ್ ಸಿಬಂದಿಗಳ ಬಳಿ ಇದ್ದ ಶಸ್ತ್ರಾಸ್ತ್ರಗಳು ಮಾತ್ರ ಸಿಕ್ಕಿಲ್ಲ.
ಕರಿಯಾ ಮುಂಡ ಅವರ ನಿವಾಸಕ್ಕೆ ನುಗ್ಗಿದ್ದ ಪತ್ತಲ್ಗಡಿ ಬೆಂಬಲಿಗರು ಅಲ್ಲಿದ್ದ ಮೂವರು ಪೊಲೀಸ್ ಸಿಬಂದಿಗಳನ್ನು ಬಲವಂತವಾಗಿ ತಮ್ಮೊಂದಿಗೆ ಅಪಹರಿಸಿ ಒಯ್ದರಲ್ಲದೆ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.