ಚೆನ್ನೈ: ಕಂಚಿ ಕಾಮಕೋಟಿ ಮಠದ ಪೀಠಾಧಿಪತಿಯಾಗಿ ಕಿರಿಯ ಸ್ವಾಮೀಜಿ ಶಂಕರ ವಿಜಯೇಂದ್ರ ಸರಸ್ವತಿ ಶಂಕರಚಾರ್ಯ ಸ್ವಾಮೀಜಿ ಅಧಿಕಾರ ಸ್ವೀಕರಿಸಿದ್ದಾರೆ.
ಹಳೆಯ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರಾಗಿ ವಿಜಯೇಂದ್ರ ಸರಸ್ವತಿ ಶಂಕರಚಾರ್ಯ ನಿನ್ನೆಯಿಂದ ಅಧಿಕಾರ ನಡೆಸುತ್ತಿರುವುದಾಗಿ ಕಾಂಚಿ ಮಠದ ಮ್ಯಾನೇಜರ್ ಸುಂದರೇಶ ಅಯ್ಯರ್ ತಿಳಿಸಿದ್ದಾರೆ.
ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಕಿರಿಯ ಸ್ವಾಮೀಜಿಯಾಗಿ 1983ರಲ್ಲಿ ನೇಮಕವಾಗಿದ್ದರು. 35 ವರ್ಷದ ನಂತರ ಮಠದ ಮುಖ್ಯಸ್ಥರಾಗಿ ಪೀಠ ಅರೋಹಣ ಮಾಡಿದ್ದಾರೆ.
ಪೊನ್ನೇರಿಯ ತಂಡಲಾಮ್ ನಲ್ಲಿ ಮಾರ್ಚ್ 13, 1969 ರಂದು ಜನಿಸಿದ ಎಂ. ಕೆ, ಶಂಕರನಾರಾಯಣನ್ , 11 ವಯಸ್ಸಿನಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಚಂದ್ರಶೇಖರೇಂದ್ರ ಸರಸ್ವತಿಸ್ವಾಮಿಗಳ ದರ್ಶನ ಪಡೆಯುತ್ತಾರೆ. ನಂತರ 1983 ಮಾರ್ಚ್ 29 ರಂದು ಕಾಂಚೀಪುರಂನ ಕಾಮಾಕ್ಷಿ ದೇವಾಲಯದಲ್ಲಿ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಗಳಾಗಿ ದೀಕ್ಷೆ ಪಡೆಯುತ್ತಾರೆ. ಇವರು ಭಾರತ ದೇಶ ಮಾತ್ರವಲ್ಲದೇ ನೆರೆಯ ನೇಪಾಳ ದೇಶದಲ್ಲೂ ಹಲವು ಉಪನ್ಯಾಸ ನೀಡಿದ್ದಾರೆ.
ಮಠದ 69 ನೇ ಪೀಠಾಧಿಪತಿಯಾಗಿದ್ದ ಜಯೇಂದ್ರ ಸರಸ್ವತಿ ಸ್ವಾಮೀಜಿಗಳು ಫೆಬ್ರವರಿ 28 ರಂದು ಇಹಲೋಕ ತ್ಯಜಿಸಿದ್ದರು. ಅವರ ಗುರು ಚಂದ್ರಶೇಖರೇಂದ್ರ ಸ್ವಾಮೀಜಿಗಳ ಸಮಾಧಿ ಬಳಿಯೇ ಅವರ ಸಮಾಧಿಯೂ ಮಾಡಲಾಗಿದೆ.
ಜಯೇಂದ್ರ ಸ್ವಾಮೀಜಿಗಳ ಸಮಾಧಿ ಹತ್ತಿರ ಮಾರ್ಚ್ 13ರಂದು ಮಠದ ವತಿಯಿಂದ ವಿಶೇಷ ಆರಾಧನಾ ಕಾರ್ಯಕ್ರಮ ಆಯೋಜಿಸಲಾಗಿದೆ.
Advertisement