ದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಮಾರ್ಚ್ 13 ರಂದು ಪ್ರತಿಪಕ್ಷ ನಾಯಕರುಗಳನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ವಿರುದ್ಧ ಒಕ್ಕೂಟ ರಚಿಸುವ ಉದ್ದೇಶದಿಂದ ಈ ಔತಣಕೂಟ ಆಯೋಜಿಸಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಸಂಸತ್ತಿನಲ್ಲಿ ಸರ್ಕಾರದ ವಿರುದ್ಧ ದಾಳಿ ಮಾಡಲು ಪ್ರತಿಪಕ್ಷಗಳನ್ನು ಕೈ ಜೋಡಿಸಲು ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳೊಂದಿಗೆ ಒಕ್ಕೂಟ ರಚಿಸಿಕೊಳ್ಳುವುದು ಇದರ ಉದ್ದೇಶ ಎನ್ನಲಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಯೇತರ ಪಕ್ಷಗಳ ಸಂಯುಕ್ತ ರಂಗ ರಚಿಸುವ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಸೋನಿಯಾಗಾಂಧಿ ಅವರಿಂದ ಪ್ರತಿಪಕ್ಷ ನಾಯಕರುಗಳಿಗೆ ಆಹ್ವಾನ ಬಂದಿದ್ದು, ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ವಿರುದ್ಧ ಒಟ್ಟಾಗಿ ಪ್ರತಿಭಟನೆ ನಡೆಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಡಿಎಂಕೆ ಮುಖಂಡ ಸ್ಟಾಲಿನ್, ಟಿಡಿಪಿಯ ನಾಯಕರು ಸಹ ಈ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಸಂಸತ್ತಿನಲ್ಲಿ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಟಿಆರ್ ಎಸ್, ಟಿಡಿಪಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಟಿಎಂಸಿ, ಎಡಪಕ್ಷ, ಡಿಎಂಕೆ ಮತ್ತಿತರ ಪಕ್ಷಗಳೊಂದಿಗೆ ಉತ್ತಮ ಸಹಕಾರವಿದೆ ಎಂದು ಟಿಎಂಸಿ ನಾಯಕ ಡೇರಿಕ್ ಓ ಬ್ರೈಯಿನ್ ಹೇಳಿದ್ದಾರೆ.
Advertisement