ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ 84 ನೇ ಅಧಿವೇಶನದಲ್ಲಿ ಇಂದು ಮಾಡಿದ ಭಾಷಣದ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ತಪ್ಪುದಾರಿಯಲ್ಲಿ ಮುನ್ನಡೆಸುತ್ತಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರಮೋದಿ ವಿರುದ್ಧ ಮಾತನಾಡುವ ಬದಲು ಮೊದಲು ಅವರ ಪಕ್ಷದ ಕ್ಷಮೆ ಕೋರಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ವಿರುದ್ಧ ಆರೋಪ ಮಾಡುವ ಬದಲು ಕಾಂಗ್ರೆಸ್ ಸಿಖ್ ಧರ್ಮವನ್ನು ಯಾವ ರೀತಿ ನಡೆಸಿಕೊಂಡಿತ್ತು. ಮಾಧ್ಯಮಗಳ ಮೇಲೆ ಹೇಗೆ ನಿಯಂತ್ರಣ ವಿಧಿಸಲಾಯಿತು, ಹೇಗೆಲ್ಲಾ ಭ್ರಷ್ಟಾಚಾರ, ಹಗರಣ ನಡೆಸಲಾಯಿತು ಎಂಬ ಬಗ್ಗೆ ಮರೆತು ಹೋಗಿತ್ತೆ ಎಂದು ಪ್ರಶ್ನಿಸಿದ ಅವರು, ಈ ಎಲ್ಲಾ ಕಾರಣಗಳಿಂದ ರಾಹುಲ್ ಗಾಂಧಿ ಮೊದಲು ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ತನ್ನ ಭಾಷಣದಲ್ಲಿ ಹಿಂದೂ ಧರ್ಮ ಹಾಗೂ ಜನರ ನಂಬಿಕೆಯನ್ನು ಅಪಮಾನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಅವರನ್ನು ಟೀಕಿಸಿರುವುದಲ್ಲದೇ, ನ್ಯಾಯ ವ್ಯವಸ್ಥೆಯ ಮೇಲೂ ದಾಳಿ ನಡೆಸಿದ್ದಾರೆ. ನರೇಂದ್ರಮೋದಿಯನ್ನು ವೈಯಕ್ತಿಕವಾಗಿ ಯಾರೂ ದಾಳಿ ಮಾಡಿರಲಿಲ್ಲ. ಆದರೆ, ರಾಹುಲ್ ಗಾಂಧಿ ಅಂತಹ ದಾಳಿ ಮಾಡಿದ್ದಾರೆ ಎಂದು ಹರಿಹಾಯ್ದರು.
ಮಾತಾಡಿ ಓಡುವುದೇ ಅವರ ಸಿದ್ಧಾಂತವಾಗಿದ್ದು, ತಪ್ಪು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಆದರೆ , ಅದನ್ನೇ ಜೋರಾಗಿ ಮಾತನಾಡಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದರು.
Advertisement