ಇದೇ ವೇಳೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಜಯಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ ಆರ್ಮುಗಸ್ವಾಮಿ ಆಯೋಗದ ಎದುರು ಹಾಜರುಪಡಿಸಲಾಗಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷಮಿಸಿ, ಆ ವೇಳೆ ತೀವ್ರ ನಿಗಾ ಘಟಕದ(ಐಸಿಯು) ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನೂ ಬಂದ್ ಮಾಡಲಾಗಿತ್ತು. ಅಲ್ಲಿಂದ ಅವರು ಕೊನೆಯುಸಿಳೆಯುವವರೆಗೆ ಕ್ಯಾಮೆರಗಳು ಬಂದ್ ಆಗಿಯೇ ಇದ್ದವು. ಜಯಲಲಿತಾ ಅವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರುತ್ತಲೇ ಅವರನ್ನು ಐಸಿಯುನಲ್ಲಿ ಇರಲಿಸಲಾಯಿತು. ಘಟಕವನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಯಿತು. 24 ಹಾಸಿಗೆಗಳ ಆ ಘಟಕದಲ್ಲಿ ಜಯಲಲಿತಾ ಅವರಿಗೆ ಮಾತ್ರವೇ ಚಿಕಿತ್ಸೆ ನೀಡಲಾಗುತ್ತಿತ್ತು. ಮಿಕ್ಕ ರೋಗಿಗಳನ್ನು ಪಕ್ಕದ ಘಟಕಕ್ಕೆ ಸ್ಥಳಾಂತರಿಸಲಾಯಿತು. ಹಾಗಾಗಿ ಅವರು ಸಿಸಿಟಿವಿ ಕ್ಯಾಮೆರಾಗಳನ್ನು ಬಂದ್ ಮಾಡಿಸಿದರು. ಯಾರು ಅವರನ್ನು ನೋಡಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಆಸ್ಪತ್ರೆ ವತಿಯಿಂದ ಆರ್ಮುಗಸ್ವಾಮಿ ಆಯೋಗದ ಎದುರು ಹಾಜರುಪಡಿಸಲಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.