ಹೈದರಾಬಾದ್: ಕಾಂಗ್ರೆಸ್ ಅದರ ಭಾಗವಾಗದಿದ್ದರೆ ಸಂಯುಕ್ತ ರಂಗ ಇರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. ಇಂತಹ ಮೈತ್ರಿಯ ನಾಯಕತ್ವ, ಸಂಧಾನದ ವಿಷಯವಾಗುತ್ತದೆ ಎಂದು ಹೇಳಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್ ಎಸ್ ಮುಖ್ಯಸ್ಥ ಕೆ,ಚಂದ್ರಶೇಖರ ರಾವ್ ಪ್ರಚುರಪಡಿಸಿದ ಸಂಯುಕ್ತರಂಗ ಬಿಜೆಪಿ ವಿರೋಧಿ ಪಕ್ಷಗಳನ್ನು ಒಡೆಯಲು ಪ್ರಯತ್ನಿಸುತ್ತಿವೆ ಎಂದು ಮಾಜಿ ಸಚಿವ ವೀರಪ್ಪ ಮೊಯ್ಲಿ ಹೈದರಾಬಾದಿನಲ್ಲಿಂದು ಆರೋಪಿಸಿದ್ದಾರೆ.
ಚಂದ್ರಶೇಖರ್ ರಾವ್ ಅವರ ಸಂಯುಕ್ತ ರಂಗದೆಡೆಗಿನ ನಡೆ ಉತ್ತಮವಾಗಿದ್ದು ಸ್ವಾಗತಾರ್ಹವಾಗಿದೆ, ಆದರೆ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಸಂಯುಕ್ತರಂಗವನ್ನು ರಚಿಸಬೇಕು ಎಂದು ಕೆ.ಚಂದ್ರಶೇಖರ ರಾವ್ ಇತ್ತೀಚೆಗೆ ಹೇಳಿದ್ದರು. ಈ ಮೂಲಕ ರಾಜಕೀಯದಲ್ಲಿ ಗುಣಮಟ್ಟದ ಬದಲಾವಣೆ ತರಬೇಕಾಗಿದ್ದು, ರಾಜಕೀಯ ಸಂಯುಕ್ತ ರಂಗದ ಮುಂದಾಳತ್ವ ವಹಿಸಲು ತಾವು ಸಿದ್ದ ಎಂದು ಹೇಳಿದರು.
ಕಾಂಗ್ರೆಸ್ ಇಲ್ಲದಿದ್ದರೆ ಈ ದೇಶದಲ್ಲಿ ಸಂಯುಕ್ತ ರಂಗ ಇರಲು ಸಾಧ್ಯವಿಲ್ಲ. ಬಿಜೆಪಿ ಜೊತೆ ಕಾಂಗ್ರೆಸ್ ನ್ನು ಕೂಡ ದೂರವಿಟ್ಟರೆ ಉದ್ದೇಶ ಈಡೇರುವುದಿಲ್ಲ. ಅಲ್ಲದೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ರಾಷ್ಟ್ರದ ಉದ್ದೇಶ ಕೂಡ ಈಡೇರುವುದಿಲ್ಲ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಇಂತಹ ಸಂಯುಕ್ತ ರಂಗವನ್ನು ಕಾಂಗ್ರೆಸ್ ಮುನ್ನಡೆಸಬೇಕೆ ಎಂದು ಕೇಳಿದಾಗ, ಮುಂದಾಳತ್ವ ವಹಿಸುವುದು ಮತ್ತು ಇನ್ನಿತರ ವಿಷಯಗಳು ಸಂಧಾನ ಮತ್ತು ಹೊಂದಾಣಿಕೆಗೆ ಬಿಟ್ಟ ವಿಚಾರ, ಅದು ಬೇರೆ ವಿಚಾರ, ಆದರೆ ಕಾಂಗ್ರೆಸ್ ನ್ನು ಸಂಯುಕ್ತ ರಂಗದಿಂದ ದೂರವಿಡುವುದು ಒಳ್ಳೆಯದಲ್ಲ. ಅದರಿಂದ ಉದ್ದೇಶ ಈಡೇರುವುದಿಲ್ಲ. ಅದು ಪರಿಣಾಮಕಾರಿಯಾಗಿ ಜಾರಿಗೆ ಬರುವುದು ಕೂಡ ಇಲ್ಲ. ವಿರೋಧ ಪಕ್ಷವನ್ನು ಒಡೆಯುವುದು ಮಾತ್ರವಾಗುತ್ತದಷ್ಟೆ ಎಂದು ಮೊಯ್ಲಿ ಹೇಳಿದರು.
ಜಾತ್ಯತೀತ ಶಕ್ತಿಗಳು ಕನಿಷ್ಠ ಕಾರ್ಯಕ್ರಮಗಳ ಮೂಲಕ ಆರಂಭವಾಗಬೇಕಿದ್ದು, ಸಂಯುಕ್ತ ರಂಗದ ಮೂಲಕವೇ ಆರಂಭವಾಗಬೇಕು, ಅಂದರೆ ಮಾತ್ರ ಅದು ಯಶಸ್ವಿಯಾಗಲು ಸಾಧ್ಯ ಎಂದರು.
ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸುವುದಿಲ್ಲ ಎಂದು ರಾಹುಲ್ ಗಾಂಧಿಯವರು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಮಗ್ರ ಅಧಿವೇಶನದಲ್ಲಿ ತೋರಿಸಿಕೊಟ್ಟಿದ್ದಾರೆ. ಆದರೆ ಈ ಮಧ್ಯೆ ಯುವಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದು ಸ್ವಾಗತಾರ್ಹ ನಡೆಯಾಗಿದೆ. ಬದಲಾವಣೆ ಎಂದರೆ ಯಥಾಸ್ಥಿತಿ ಕಾಪಾಡಿಕೊಂಡು ಪಕ್ಷವನ್ನು ಕಟ್ಟುವುದೆಂದರ್ಥವಲ್ಲ. ಯುವಶಕ್ತಿಯ ಮೂಲಕ ಕಾಂಗ್ರೆಸ್ ಗೆ ಸಮಗ್ರ ಬದಲಾವಣೆಯ ಅಗತ್ಯವಿದೆ ಎಂದು ಮೊಯ್ಲಿ ಅಭಿಪ್ರಾಯಪಟ್ಟರು.
Advertisement