ನವ ದೆಹಲಿ : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರ ವಿರುದ್ಧದ ವಾಗ್ದಂಡನೆ ನೋಟಿಸ್ ನ್ನು ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ತಿರಸ್ಕರಿಸಿದ ಕೆಲ ದಿನಗಳ ನಂತರ ಕಾಂಗ್ರೆಸ್ಸಿನ ಇಬ್ಬರು ರಾಜ್ಯಸಭೆ ಸದಸ್ಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ವೆಂಕಯ್ಯನಾಯ್ಡು ಅವರ ನಿರ್ಧಾರದ ವಿರುದ್ಧ ರಾಜ್ಯಸಭೆಯ ಸದಸ್ಯರಾದ ಪ್ರತಾಪ್ ಸಿಂಗ್ ಬಾಜ್ವ ಹಾಗೂ ಅಮ್ಮಿ ಹರ್ಷದ್ರೇ ಯಜ್ನಿಕ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ವೆಂಕಯ್ಯನಾಯ್ಡು ಅವರ ನಿರ್ಧಾರ ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಅನಿಯಂತ್ರಿತ ಹಾಗೂ ಕಾನೂನುಬಾಹಿರವಾಗಿದೆ ಎಂದು ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.
ಅರ್ಜಿಯ ತುರ್ತು ವಿಚಾರಣೆಗಾಗಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಜೆ. ಚೆಲ್ಲಮೇಶ್ವರ್ ಪೀಠದ ಮುಂದೆ ಇದನ್ನು ಕಪಿಲ್ ಸಿಬಿಲ್ ಉಲ್ಲೇಖಿಸಿದ್ದಾರೆ. ಆದರೆ, ಯಾರು ಈ ಅರ್ಜಿ ವಿಚಾರಣೆ ನಡೆಸುತ್ತಾರೆ ಎಂಬುದು ತಿಳಿದುಬಂದಿಲ್ಲ.
ಆದಾಗ್ಯೂ, ನಾಳೆ ಮತ್ತೆ ಬರುವಂತೆ ಕಬಿಲ್ ಸಿಬಲ್ ಹಾಗೂ ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಧೀಶ ಚೆಲ್ಲಮೇಶ್ವರ್ ತಿಳಿಸಿದ್ದಾರೆ.
ರಾಜ್ಯಸಭಾ ಅಧ್ಯಕ್ಷರಾಗಿ ಉಪರಾಷ್ಟ್ರಪತಿಗಳು ತಮ್ಮ ವಿವೇಚನೆಯನ್ನು ನಿರ್ವಹಿಸಬಾರದು, ನ್ಯಾಯಾಧೀಶರ ವಿಚಾರಣಾ ಕಾಯಿದೆಯಡಿಯಲ್ಲಿ ತನಿಖಾ ಸಮಿತಿಯನ್ನು ಸ್ಥಾಪಿಸಬೇಕು ನ್ಯಾಯಮೂರ್ತಿ ಮಿಶ್ರಾ ವಿರುದ್ಧ ಆರೋಪಗಳನ್ನು ತನಿಖೆ ಮಾಡಲು ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಹೇಳಲಾಗಿದೆ.
ವಾಗ್ದಂಡನೆಯ ನೋಟಿಸ್ ನಲ್ಲಿರುವ ಆರೋಪಗಳು ಅತ್ಯಂತ ಗಂಭೀರವಾಗಿವೆ ಮತ್ತು ಪೂರ್ಣ ಪ್ರಮಾಣದ ವಿಚಾರಣೆಗೂ ಅರ್ಜಿಯೂ ಯೋಗ್ಯವಾಗಿದ್ದು, ಸಮಾಲೋಚನೆ ಇಲ್ಲದೆಯೇ ರಾಜ್ಯಸಭೆಯ ಸಭಾಪತಿಗಳು ವಾಗ್ದಾಂಡನೆ ನೋಟಿಸ್ ನ್ನು ತಿರಸ್ಕರಿಸಿದ್ದಾರೆ ಎಂದು ಅರ್ಜಿಯು ಹೇಳಿದೆ
Advertisement