ಕೋಲ್ಕತ್ತಾ: ರಾಜಕೀಯ ಲಾಭಕ್ಕೆ ತಮ್ಮನ್ನು ಹತ್ಯೆ ಮಾಡಲು ರಾಜಕೀಯ ಪಕ್ಷವೊಂದು ಪಿತೂರಿ ನಡೆಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಅವರು ಯಾರ ಹೆಸರನ್ನೂ ಹೇಳಿಲ್ಲ.
ಮೊದಲು ಒಬ್ಬರ ತೇಜೋವಧೆ ಮಾಡಿ ನಂತರ ಆ ವ್ಯಕ್ತಿಯನ್ನು ಮುಗಿಸುವುದು ರಾಜಕೀಯ ಪಕ್ಷದ ವಿಲಕ್ಷಣ ಗುಣ ಮತ್ತು ವಿಧಾನವಾಗಿದೆ. ಆದರೆ ನಾನು ಸಾವಿಗೆ ಹೆದರುವುದಿಲ್ಲ. ಈ ಹಿಂದೆ ಕೂಡ ನನ್ನನ್ನು ಹತ್ಯೆ ಮಾಡಲು ಸಂಚು ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಬಂಗಾಳಿ ಟಿವಿ ಚಾನೆಲ್ ಝೀ 24 ಗಂಟೆಗೆ ನೀಡಿರುವ ಸಂದರ್ಶನದಲ್ಲಿ ಅವರು, ನನ್ನನ್ನು ಹತ್ಯೆ ಮಾಡಲು ರಾಜಕೀಯ ಪಕ್ಷವೊಂದು ಸಂಚು ನಡೆಸಿದ್ದು ನನಗೆ ಗೊತ್ತಿದೆ. ಅದಕ್ಕೆ ಅದು ಸುಪಾರಿ ಕೂಡ ನೀಡಿತ್ತು. ವ್ಯಕ್ತಿಗೆ ರಾಜಕೀಯ ಪಕ್ಷವು ಅಡ್ವಾನ್ಸ್ ಹಣವನ್ನು ಕೂಡ ನೀಡಿತ್ತು. ಸುಪಾರಿ ಪಡೆದವ ನನ್ನ ನಿವಾಸ, ಕಚೇರಿ ಮತ್ತು ಸುತ್ತಮುತ್ತಲ ಸ್ಥಳಗಳಲ್ಲಿ ಸುಳಿದಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ರಾಜಕೀಯ ಆಕಾಂಕ್ಷೆಗಳಿಗೆ ತಾವು ಈಗಾಗಲೇ ಸಿದ್ಧತೆ ನಡೆಸಿದ್ದು, ತಮ್ಮ ಪಕ್ಷವನ್ನು ನಿರ್ನಾಮ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ವಿಷಯದಲ್ಲಿ ನಾನು ನಿಶ್ಚಯವಾಗಿರುವುದರಿಂದ ನನ್ನ ರಾಜಕೀಯ ಪಕ್ಷದ ವಿಷಯಗಳ ಕುರಿತು ಈಗಾಗಲೇ ಸಿದ್ಧತೆ ನಡೆಸಿದ್ದೇನೆ. ನನ್ನ ಅನುಪಸ್ಥಿತಿಯಲ್ಲಿ ಯಾರು ಪಕ್ಷವನ್ನು ಮುನ್ನಡೆಸಬೇಕೆಂದು ನನಗೆ ಈಗಾಗಲೇ ತಿಳಿದಿದೆ. ನನ್ನ ಪಕ್ಷವನ್ನು ತೊಂದರೆಯಲ್ಲಿಡಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಶೇಷ ಭದ್ರತಾ ವ್ಯವಸ್ಥೆಗಳಿಗಾಗಿ ತಮ್ಮ ನಿವಾಸವನ್ನು ಬದಲಾಯಿಸುವಂತೆ ಪೊಲೀಸರು ಮತ್ತು ಜಾಗೃತದಳ ಸಲಹೆ ನೀಡಿದ್ದರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಆದರೆ ನನಗೆ ಜನರ ಮಧ್ಯೆ ಇರುವುದು, ಅವರಿಗಾಗಿ ಕೆಲಸ ಮಾಡುವುದೆಂದರೆ ಇಷ್ಟ. ಯಾರೊಬ್ಬರೂ ನನಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಮತ್ತು ಜನರಿಗಾಗಿ ಕೆಲಸ ಮಾಡುವುದನ್ನು ನಿಲ್ಲುಸುವುದಿಲ್ಲ ಎಂದು ಹೇಳಿದರು.
Advertisement