ಚೆನ್ನೈ: ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯ ಪುತ್ರಿ ಡಿಎಂಕೆ ರಾಜ್ಯಸಭಾ ಸದಸ್ಯೆಯಾದ ಕನಿಮೋಳಿ ಅವರ ಒಪ್ಪಿಗೆ ಇಲ್ಲದೆ ಅವರ ಖಾಸಗಿ ಜೀವನ ಕುರಿತ ಲೇಖನ ಪ್ರಕಟಿಸುತ್ತಿದ್ದ ತಮಿಳು ಪಾಕ್ಷಿಕವೊಂದರ ಮೇಲೆ ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿದೆ.
ಆದರೆ ಕನಿಮೋಳಿ ಓರ್ವ ಸಂಸತ್ ಸದಸ್ಯಾರಾಗಿ, ರಾಜಕೀಯ ನಾಯಕಿಯಾಗಿ ಮಾಡಿದ ಸಾಧನೆ ಚಿತ್ರಣ ನಿಡಲು ನಿರ್ಬಂಧ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಈ ಹಿಂದೆ ನಿಡಿದ ತಡೆಯಾಜ್ಞೆಯನ್ನು ರದ್ದುಪಡಿಸುವಂತೆ ಕೋರಿ ಕುಮುದಂ ಗ್ರೂಪ್ ನಿಯತಕಾಲಿಕೆಗಳ ನಿರ್ದೇಶಕ ವರದರಾಜನ್ ಸಲ್ಲಿಸಿದ್ದ ರಜಿಯನ್ನು ನ್ಯಾಯಮೂರ್ತಿ ಆರ್. ಸುಬ್ರಮಣಿಯನ್ ವಜಾಗೊಳಿಸಿದ್ದಾರೆ.
"ಕನಿಮೋಳಿಯವರ ಅನುಮತಿ ಇಲ್ಲದೆ ಅವರ ಕುಟುಂಬ,, ವಿವಾಹ, ಶಿಕ್ಷಣ, ಮಕ್ಕಳು ಸೇರಿ ಖಾಸಗಿ ಜೀವನದ ಬಗ್ಗೆ ಯಾವುದೇ ವರದಿಯನ್ನು ಪ್ರಕಟಿಸುವಂತಿಲ್ಲ " ಎಂದು ನ್ಯಾಯಾಲಯ ಹೇಳಿದೆ.
"ಸಾರ್ವಜನಿಕ ಹಿತಾಸಕ್ತಿ ವಿಚಾರ ಹೊಂದಿರುವ ಯಾವ ಲೇಖನವನ್ನು ಪ್ರಕಟಿಸುವ ಮೊದಲು ಲೇಖನದ ಸಾರಾಂಶ ಅಥವಾ ಇಡೀ ಲೇಖನವನ್ನು ಅವರ ಈ-ಮೇಲ್ ಗೆ ರವಾನಿಸಬೇಕು ಮತ್ತು ಪ್ರತಿಕ್ರಿಯೆ ಬರುವ ತನಕ ಕಾಯಬೇಕು. ಒಂದು ವೇಳೆ 48 ಗಂಟೆಗಳ ಒಳಗೆ ಯಾವುದೇ ಪ್ರತಿಕ್ರಿಯೆ ಬಂದಲ್ಲಿ ಆ ಪ್ರತಿಕ್ರಿಯೆಗೆ ಸಂಬಂಧಿಸಿದ ವಿಚಾರವನ್ನು ಸಹ ಲೇಖನದಲ್ಲಿ ಸೇರಿಸಿಕೊಳ್ಳಬೇಕಾಗುವುದು. ಅದೇ 48 ಗಂಟೆಗಳೊಳಗೆ ಯಾವುದೇ ಪ್ರತಿಕ್ರಿಯೆಯ ಬಾರದಿದ್ದಲ್ಲಿ ಲೇಖನವನ್ನು ಯಥಾವತ್ ಪ್ರಕಟಿಸಲು ಪತ್ರಿಕೆಗೆ ಸ್ವಾತಂತ್ರವಿದೆ" ಎಂದು ನ್ಯಾಯಾಧೀಶರು ಹೇಳಿದರು.
ಯಾವುದೇ ಪತ್ರಿಕೆಗಳು ವ್ಯಕ್ತಿಯ ಖಾಸಗಿತನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಕಟಿಸುವದಕ್ಕೆ ಮಾತ್ರವೇ ಈ ನಿರ್ಬಂಧಗಳು ಅನ್ವಯವಾಗಲಿದೆ ಎಂದು ನ್ಯಾಯಾಧಿಶರು ಸ್ಪಷ್ಟಪಡಿಸಿದ್ದಾರೆ.
ತನ್ನ ವೈಯುಕ್ತಿಕ ಬದುಕಿನ ಕುರಿತಂತೆ ಪತ್ರಿಕೆಯು ಲೇಖನ, ಚಿತ್ರಗಳನ್ನು ಪ್ರಕಟಿಸುವ ಮೂಲಕ ತನ್ನ ಹೆಸರಿಗೆ ಕಳಂಕ ಹೊರಿಸಲು ಪ್ರಯತ್ನಿಸುತ್ತಿದೆ ಎಂದು ಡಿಎಂಕೆ ನಾಯಕಿ ಕನಿಮೋಳಿ ತಮಿಳುನಾಡು ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹಿಡಿದ್ದರು. ಅಲ್ಲದೆ ಅವರು ಪತ್ರಿಕೆ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿ 1 ಕೋಟಿ ರೂ ಪರಿಹಾರಕ್ಕಾಗಿ ಮೊರೆ ಇಟ್ಟಿದ್ದರು.