ರಾಫೆಲ್ ಡೀಲ್ ತನಿಖಾ ವರದಿ ಬಹಿರಂಗವಾದರೆ ಮೋದಿ ಅಸ್ತಿತ್ವವೇ ಅಲುಗಾಡುತ್ತದೆ: ರಾಹುಲ್ ಗಾಂಧಿ

ರಾಫೆಲ್ ಜೆಟ್ ಯುದ್ದ ವಿಮಾನ ಖರೀದಿ ಹಗರಣದ ತನಿಖಾ ವರದಿ ಬಹಿರಂಗವಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಸ್ತಿತ್ವವೇ...
ಸುದ್ದಿಗೋಷ್ಟಿಯಲ್ಲಿ ರಾಹುಲ್ ಗಾಂಧಿ
ಸುದ್ದಿಗೋಷ್ಟಿಯಲ್ಲಿ ರಾಹುಲ್ ಗಾಂಧಿ
ನವದೆಹಲಿ: ಬಹುಕೋಟಿ ರಾಫೆಲ್ ಜೆಟ್ ಯುದ್ದ ವಿಮಾನ ಖರೀದಿ ಹಗರಣದ ತನಿಖಾ ವರದಿ ಬಹಿರಂಗವಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಸ್ತಿತ್ವವೇ ಅಲುಗಾಡಿ ಹೋಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರಾಫೆಲ್ ಜೆಟ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಒಪ್ಪಂದ ಬಳಿಕ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಗೆ 284 ಕೋಟಿ ಹಣ ಪಾವತಿ ಮಾಡಿದೆ. ಇದೇ ಹಣದಿಂದಲೇ ಅನಿಲ್ ಅಂಬಾನಿ ಭೂಮಿ ಖರೀದಿ ಮಾಡಿದ್ದಾರೆ. ಅಂದರೆ ಈ ಹಿಂದೆ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಹೇಳಿದ್ದ ಮಾತು ಸ್ಳುಳ್ಳು ಎಂದು ಇಲ್ಲಿ ಸಾಬೀತಾಗಿದೆ. ಈ ಹಿಂದೆ ಅವರು ರಿಲಯನ್ಸ್ ಸಂಸ್ಛೆಯ ಬಳಿ ಭೂಮಿ ಇದ್ದುದರಿಂದಲೇ ತಾವು ಆ ಸಂಸ್ಛೆಯೊಂದಿಗೆ ಕೈ ಜೋಡಿಸಿದವು ಎಂದು ಹೇಳಿದ್ದರು ಎಂದು ರಾಹುಲ್ ಹೇಳಿದ್ದಾರೆ.
ಅಂತೆಯೇ ಡಸ್ಸಾಲ್ಟ್ ಸಂಸ್ಥೆ ಭಾರತದಲ್ಲಿ ನಷ್ಟದಲ್ಲಿರುವ ಸಂಸ್ಥೆಯೊಂದಿಗೆ ಏಕೆ ಕೈ ಜೋಡಿಸಿತು ಎನ್ನುವುದು ಯಕ್ಷ ಪ್ರಶ್ನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ನೇರ ಕೈವಾಡ ಇದರಲ್ಲಿ ಇದೆ ಎಂಬುದು ಇದರಿಂದಲೇ ಸಾಬೀತಾಗುತ್ತದೆ. ಡಸ್ಸಾಲ್ಟ್ ಏವಿಯೇಷನ್ ಸಿಇಒ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಣೆ ಮಾಡಲು ಸುಳ್ಳು ಹೇಳುತ್ತಿದ್ದಾರೆ. ಆದರೆ ರಾಫೆಲ್ ಜೆಟ್ ಖರೀದಿ ಹಗರಣದ ತನಿಖಾ ವರದಿ ಬಹಿರಂಗವಾದರೆ ಪ್ರಧಾನಿ ಮೋದಿ ಅವರ ಅಸ್ತಿತ್ವ ಅಲುಗಾಡುತ್ತದೆ. ಆದರೆ ಇದು ಸಾಧ್ಯವಾಗುತ್ತಿಲ್ಲ. ಕಾರಣ ಪ್ರಧಾನಿ ಮೋದಿ ಈ ದೇಶದ ನಿರ್ಣಯಕಾರರಾಗಿದ್ದಾರೆ, ಭ್ರಷ್ಟಾಚಾರ ಈ ಹಗರಣ ಮುಚ್ಚಿ ಹೋಗಲು ಕಾರಣ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಅನಿಲ್ ಅಂಬಾನಿ ನಡುವೆ ಸುಮಾರು 30 ಸಾವಿರ ಕೋಟಿ ಡೀಲ್ ನಡೆದಿದ್ದು, ಅಂಬಾನಿ ಮತ್ತು ಪ್ರಧಾನಿ ಮೋದಿ ಸ್ನೇಹದಿಂದಾಗಿಯೇ ಡಸ್ಸಾಲ್ಟ್ ಏವಿಯೇಷನ್ ರಿಲಯನ್ಸ್ ನೊಂದಿಗೆ ಕೈ ಜೋಡಿಸಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಇಲ್ಲಿ ದೇಶದ ಹೆಮ್ಮೆಯ ಸಂಸ್ಥೆ ಎಚ್ ಎಎಲ್ ಅನಾಥವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com