ಸೂರತ್: ಗುಜರಾತ್ ನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತ್ರ ಹೊಂದಿರುವ ಚಿನ್ನ ಹಾಗೂ ಬೆಳ್ಳಿಯ ಗಟ್ಟಿಗಳು ಖರೀದಿದಾರರ ಗಮನ ಸೆಳೆಯುತ್ತಿವೆ.
ಆಭರಣ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಈ ವರ್ಷ ಚಿನ್ನದ ಗಟ್ಟಿ ಹಾಗೂ ನಾಣ್ಯಗಳ ಮೇಲೆ ಲಕ್ಷ್ಮೀ ಹಾಗೂ ಗಣೇಶನ ಬದಲು ನರೇಂದ್ರ ಮೋದಿ, ವಾಜಪೇಯಿ ಅವರ ಚಿತ್ರ ಮೂಡಿದೆ.
ನಮಗೆ ಮೋದಿ ಹಾಗೂ ವಾಜಪೇಯಿ ಕೂಡ ದೇವರಿದ್ದಂತೆ. ಹೀಗಾಗಿ ಇವರ ಭಾವಚಿತ್ರವಿರುವ ಬಂಗಾರದ್ದ ಗಟ್ಟಿಯನ್ನು ಈ ವರ್ಷ ಖರೀದಿಸಿ, ಪೂಜಿಸುವ ಮೂಲಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಗ್ರಾಹಕರೊಬ್ಬರು ಹೇಳಿಕೊಂಡಿದ್ದಾರೆ.
ಪ್ರಧಾನಿ ಭಾವಚಿತ್ರವಿರುವ ಚಿನ್ನ ಮಾರಾಟ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ಸಿಎಂ ವಿಜಯ್ ರೂಪಾನಿ ಅವರ ಭಾವಚಿತ್ರವನ್ನೊಳಗೊಂಡ ಬಂಗಾರದ ರಾಖಿಯನ್ನು ಮಾರಾಟ ಮಾಡಲಾಗಿತ್ತು.