ಬಸ್ತಾರ್(ಛತ್ತೀಸ್ ಗಢ): ಈತನನ್ನು ನೋಡಲು ಪ್ರಧಾನಿ ನರೇಂದ್ರ ಮೋದಿಯಂತೆಯೇ ಇದ್ದಾರೆ. ಅವರಂತೆಯೇ ಸೂಟು ಧರಿಸಿ ಮಾತನಾಡುವ ಶೈಲಿಗೆ ಜನ ನರೇಂದ್ರ ಮೋದಿಯೇ ಮಾತನಾಡುತ್ತಿರುವ ಹಾಗೆ ಬಾವಿಸುತ್ತಾರೆ. ಹಾಗೆಯೇ ಇವರ ಮಾತುಗಳು ಸಹ "ಸ್ನೇಹಿತರೇ" ಎನ್ನುವ ಪದದೊಡನೆಯೇ ಪ್ರಾರಂಭವಾಗುತ್ತದೆ. ಆದರೆ ಈತ ನಮ್ಮ ಪ್ರಧಾನಿ ಮೋದಿಯಲ್ಲ!
ಅವರೇ ಛತ್ತೀಸ್ ಗಢ ನಕ್ಸಲ್ ಪೀಡಿತ ಪ್ರದೇಶ ಬಸ್ತಾರ್ ನ ಕಾಂಗ್ರೆಸ್ ಪ್ರಚಾರಕ ಅಭಿನಂದನ್ ಪಾಠಕ್ "ಅವರು ಮೋದಿಯವರ "ಅಚ್ಚೇ ದಿನ್" ಎಂದೆಂದಿಗೂ ಬರುವುದಿಲ್ಲ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ.
ಕಳೆದ ತಿಂಗಳು ನಟ, ರಾಜಕಾರಣಿ ರಾಜ್ ಬಬ್ಬರ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರುವ ಮುನ್ನ ಬಿಜೆಪಿ ನೇತೃತ್ವದ ಎನ್ ಡಿಎ ಸಹಯೋಗಿ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಾಳೆ) ಯ ಉತ್ತರಪ್ರದೇಶ ರಾಜ್ಯದ ಉಪಾಧ್ಯಕ್ಷ ಹುದ್ದೆಯಲ್ಲಿದ್ದರು.
"ನಾನು ನೋಡಲು ಮೋದಿಯವರಂತೆ ಇದ್ದ ಕಾರಣ ಜನರು ನನ್ನ ಬಳಿ ಅಚ್ಚೇ ದಿನ್ ಎಲ್ಲಿದೆ ಎಂದು ಪದೇ ಪದೇ ಕೇಳುತ್ತಿದ್ದರು. ಆದರೆ ಮೋದಿ ಆಡಳಿತದಲ್ಲಿ ಸಾಮಾನ್ಯ ಪ್ರಜೆ ಅನುಭವಿಸುವ ನೋವನ್ನು ಕಂಡ ನನ್ನ ಮನಸ್ಸು ಮರುಗಿತು. ಹೀಗಾಗಿ ನಾನು ಎನ್ ಡಿಎ ಮೈತ್ರಿಯಿಂದ ಹೊರಬಂದು ಕಾಂಗ್ರೆಸ್ ಸೇರಿದೆ" ಅಭಿನಂದನ್ ಹೇಳಿದ್ದಾರೆ.
ಜಗದಲ್ಪುರ್, ದಾಂತೇವಾಡಾ, ಕೊಂಡಗಾವ್ ಮತ್ತು ಬಸ್ತಾರ್ ಸೇರಿದಂತೆ ಹಲವು ಪ್ರಡೇಶದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿರುವ ಅವರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜನರು ದುಂಬಾಲು ಬೀಳುತ್ತಾರೆ.
ತನ್ನ ಪ್ರಚಾರ ಕಾರ್ಯದಲ್ಲಿ ಪಾಠಕ್ ಪ್ರತಿ ಬಾರಿಯೂ ಮೋದಿಯವರ ಮಾತುಗಳನ್ನೇ ಅನುಸರಿಸಿ ಅವರನ್ನು ಟೀಕಿಸುತ್ತಾರೆ. ಮೋದಿ ಹೇಳಿದ್ದ ಅಚ್ಚೇ ದಿನ್ ಬರಲಿಲ್ಲ, ಅವರು ಕಪ್ಪು ಹಣ ಹಿಂದಿರುಗಿದ ಬಳಿಕ ಪ್ರತಿ ಭಾರತೀಯರ ಬ್ಯಾಂಕ್ ಖಾತೆಗೆ ಹಾಕುವೆ ಎಂದಿದ್ದ 15 ಲಕ್ಷ ರು. ಹಿಂತಿರುಗಿಲ್ಲ ಎಂದು ಅವರು ಟೀಕಿಸುತ್ತಾರೆ.
2014 ರ ನಂತರ ಅವರು ಮೊದಲ ಬಾರಿಗೆ ಬಿಜೆಪಿ ಮತ್ತು ಮೋದಿ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ ಇದಕ್ಕೆ ಮುನ್ನ ಅವರು ಎಂದಿಗೂ ಕೇಸರಿ ಪಕ್ಷ ಹಾಗೂ ಅದರ ಅಂಗಪಕ್ಷಗಳ ಕುರಿತಂತೆ ಮಾತ್ರ ಪ್ರಚಾರ ನಡೆಸಿದ್ದರು.