ರಾಯ್ ಪುರ: ನಕ್ಸಲೀಯರಿಂದ ಚುನಾವಣೆ ಬಹಿಷ್ಕಾರದ ಬೆದರಿಕೆ ನಡುವೆಯೂ ಛತ್ತೀಸ್ ಘಡ ವಿಧಾನಸಭೆಯ ಮೊದಲ ಹಂತದ ಚುನಾವಣೆ ನಾಳೆ ನಡೆಯುತ್ತಿದ್ದು, ನಕ್ಸಲ್ ಭಾದಿತ ಜಿಲ್ಲೆಗಳಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ.
ಬಿಜಾಪುರ ಜಿಲ್ಲೆಯ ಕಾಂಕೇರ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಗಡಿ ಭದ್ರತಾ ಪಡೆಯ ಸಬ್ ಇನ್ಸ್ ಪೆಕ್ಟ್ ರ್ ಒಬ್ಬರು ಹತ್ಯೆಯಾಗಿದ್ದಾರೆ. ಈ ಮಧ್ಯೆ ನಕ್ಸಲ್ ಭಾದಿತ 8 ಜಿಲ್ಲೆಗಳ 18 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಮೊದಲ ಹಂತದಲ್ಲಿ ಶಾಂತಿಯುತ ಚುನಾವಣೆ ಹಿನ್ನೆಲೆಯಲ್ಲಿ ಅರೆಸೇನಾ ಪಡೆ ಸೇರಿದಂತೆ ಸುಮಾರು 1 ಲಕ್ಷ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ನಕ್ಸಲ್ ನಿಗ್ರಹ ಪಡೆಯ ವಿಶೇಷ ಮಹಾನಿರ್ದೇಶಕ ಡಿ. ಎಂ. ಅವಾಸ್ತಿ ತಿಳಿಸಿದ್ದಾರೆ.
ಚುನಾವಣಾ ಕಾರ್ಯಕ್ಕೆ ನಕ್ಸಲೀಯರಿಂದ ಯಾವುದೇ ತೊಂದರೆ ಉಂಟಾಗದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಆರ್ ಪಿಎಫ್. ಬಿಎಸ್ ಎಫ್, ಐಟಿಬಿಎಫ್ ಸೇರಿದಂತೆ ಒಟ್ಟಾರೇ 650 ತುಕಡಿಗಳನ್ನು ಚುನಾವಣಾ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೇ, ಪ್ಯಾರಾ ಮಿಲಿಟರಿ ಸಿಬ್ಬಂದಿ ಹಾಗೂ ರಾಜ್ಯದ 200 ತುಕಡಿಗಳನ್ನು ಈಗಾಗಲೇ ನಕ್ಸಲ್ ನಿಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ 650 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು, ದುರ್ಘಮ ಪ್ರದೇಶಗಳಲ್ಲಿ ಚುನಾವಣಾಧಿಕಾರಿಗಳನ್ನು ಕರೆದುಕೊಂಡು ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ.ಭಾರತೀಯ ವಾಯುಪಡೆ ಮತ್ತು ಬಿಎಸ್ ಎಫ್ ಹೆಲಿಕಾಪ್ಟರ್ ಗಳನ್ನು ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
Advertisement