ರಾಯಪುರ್: ಛತ್ತೀಸ್ ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ರಸ್ತೆ ಗುತ್ತಿಗೆದಾರನನ್ನು ಹತ್ಯೆ ಮಾಡಿ, ಆರು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಗುರುವಾರ ನಡೆದಿದೆ.
ದೋರ್ನಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಮಿಸ್ಮಾ - ಚಿಚೋರ್ಡ್ ಗುಡ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಶೇಕ್ ಮೀನಾ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಈ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಈ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ಹರಿಶಂಕರ್ ಸಾಹು ಒಡೆತನದ ಸಾಹು ಮಹಾಮಯ ಬ್ಯುಲ್ಡ್ ಕೊನ್ ಕಂಪನಿಗೆ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ರಸ್ತೆ ಕಾಮಗಾರಿ ಸ್ಥಳವನ್ನು ಸುತ್ತುವರಿದ ಸುಮಾರು ಒಂದು ಡಜನ್ ಶಸ್ತ್ರ ಸಜ್ಜಿತ ನಕ್ಸಲರು, ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಗುತ್ತಿಗೆದಾರ ಸಾಹು ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಸಾಹು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೀನಾ ಹೇಳಿದ್ದಾರೆ.
ಸಾಹುಗೆ ಸೇರಿದ ಒಂದು ಎಸ್ ಯುವಿ ವಾಹನ ಹಾಗೂ ಸ್ಥಳದಲ್ಲಿದ್ದ ಇತರೆ ಐದು ವಾಹನಗಳನ್ನು ನಕ್ಸಲರು ಸುಟ್ಟು ಹಾಕಿದ್ದಾರೆ ಎಂದು ಮೀನಾ ತಿಳಿಸಿದ್ದಾರೆ.