ಪುಣೆ: ಸಮಾಜ ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ಭಯದ ವಾತವಾರಣ ಸೃಷ್ಟಿಸಲು ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಮಾಡಲಾಗಿದೆ ಎಂದು ಸಿಬಿಐ ಇಂದು ನ್ಯಾಯಾಲಯಕ್ಕೆ ತಿಳಿಸಿದೆ.
ದಾಬೋಲ್ಕರ್ ಹತ್ಯೆ ಪ್ರಕರಣದ ಆರೋಪಿಗಳಾದ ಸಚಿನ್ ಅಂದೂರೆ ಮತ್ತು ಶರದ್ ಕಾಲಸ್ಕರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಸೆಕ್ಷನ್ 15 ( ಉಗ್ರ ಚಟುವಟಿಕೆ ) ಮತ್ತು ಸೆಕ್ಷನ್ 16ರಡಿಯಲ್ಲಿ ( ಉಗ್ರ ಚಟುವಟಿಕೆಗೆ ಶಿಕ್ಷೆ ) ಚಾರ್ಚ್ ಶೀಟ್ ದಾಖಲಿಸಲು 90 ದಿನಗಳ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಸಿಬಿಐ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದೆ.
ಈ ಪ್ರಕರಣದಲ್ಲಿ ಅಂದೂರೆ ಮತ್ತು ಕಾಲಸ್ಕರ್ ಸೇರಿದಂತೆ ಬಂಧಿಸಲಾಗಿರುವ ಆರು ಆರೋಪಿಗಳ ಪೈಕಿ ಐವರ ವಿರುದ್ಧ ಪೂರಕ ಜಾರ್ಜ್ ಶೀಟ್ ದಾಖಲಿಸಲು ಸಿಬಿಐ ನವೆಂಬರ್ 18ರಿಂದ 90 ದಿನ ತೆಗೆದುಕೊಂಡಿದೆ.
ಆರು ಮಂದಿ ಆರೋಪಿಗಳ ವಿರುದ್ಧವೂ ಸಿಬಿಐ 2016ರಲ್ಲಿ ಜಾರ್ಜ್ ಶೀಟ್ ದಾಖಲಿಸಿತ್ತು.
2013, ಆಗಸ್ಟ್ 20 ರಂದು ಅಂದೂರೆ ಹಾಗೂ ಕಾಲಸ್ಕರ್ ಪುಣೆಯಲ್ಲಿ ವಿಚಾರವಾದಿ ನರೇಂದ್ರ ದಾಬೊಲ್ಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ನರೇಂದ್ರ ದಾಬೋಲ್ಕರ್ ಅವರನ್ನು ವ್ಯವಸ್ಥಿತ ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ ಎಂದು ಪ್ರಥಮ ದರ್ಜೆ ಜೂಡಿಷಿಯಲ್ ಮ್ಯಾಜಿಸ್ಟ್ರೇಟ್ ಬಳಿ ಸಿಬಿಐ ಹೇಳಿಕೆ ನೀಡಿದೆ.
ಜನರ ಮನಸ್ಸು ಹಾಗೂ ಸಮಾಜದಲ್ಲಿ ಭಯದ ವಾತಾವಾರಣ ಸೃಷ್ಟಿಸಲು ನರೇಂದ್ರ ದಾಬೋಲ್ಕರ್ ಹತ್ಯೆ ಮಾಡುವ ಮೂಲಕ ಸನಾತನ ಸಂಸ್ಥೆಯಲ್ಲಿ ನಂಬಿಕೆ ಇರದ ಜನರಿಗೆ ಉದ್ದೇಶಪೂರ್ವಕವಾಗಿ ಸಂದೇಶ ಕಳುಹಿಸಲಾಗಿದೆ ಎಂದು ಸಿಬಿಐ ತಿಳಿಸಿದೆ
Advertisement