ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಸಮಯಬೇಕು: ದೇವಸ್ವಂ ಮಂಡಳಿ

ಅತ್ತ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿರುವಂತೆಯೇ ಇತ್ತ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲದ ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಸಮಯಬೇಕಿದೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಚ್ಚಿ: ಅತ್ತ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿರುವಂತೆಯೇ ಇತ್ತ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲದ ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಸಮಯಬೇಕಿದೆ ಎಂದು ಹೇಳಿದೆ.
ಮಹಿಳಾ ಪ್ರವೇಶದ ವಿರುದ್ಧ ಹೆಚ್ಚುತ್ತಿರುವ ಜನಾಕ್ರೋಶದ ಹಿನ್ನಲೆಯಲ್ಲಿ ದೇವಸ್ವಂ ಮಂಡಳಿ ಈ ನಿರ್ಧಾರಕ್ಕೆ ಬಂದಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು ಅಸಾಧ್ಯ ಎಂದು ಪರೋಕ್ಷವಾಗಿ ಹೇಳಿದೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಕೂಡ ಒಮ್ಮತದ ತೀರ್ಮಾನಕ್ಕೆ ಬರದೇ ವಿಫಲವಾಗಿತ್ತು. ಇದೇ ಕಾರಣಕ್ಕೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲನೆಗಾಗಿ ಸಮಯಾವಕಾಶ ಕೇಳುವ ಸಾಧ್ಯತೆ ಇದೆ.
ಅಲ್ಲದೆ ಇದೇ ಗುರುವಾರದಿಂದ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಎರಡು ತಿಂಗಳ ಯಾತ್ರಾವಧಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಕೇರಳ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಅದರ ನಡುವೆ ಮಹಿಳೆಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವುದರಿಂದ ಖಂಡಿತಾ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕೇರಳ ಸರ್ಕಾರ ಈ ವಿಚಾರದಲ್ಲಿ ಹಿಂದಡಿ ಇಟ್ಟಿದೆ ಎನ್ನಲಾಗುತ್ತಿದೆ.
ಶಬರಿಮಲೆ ಕ್ರಿಯಾ ಸಮಿತಿಯಿಂದ ಇಂದು ಕೇರಳ ಬಂದ್
ಏತನ್ಮಧ್ಯೆ ಹಿಂದೂ ಐಕ್ಯವೇದಿಯ ರಾಜ್ಯಾಧ್ಯಕ್ಷರಾದ ಕೆಪಿ ಶಶಿಕಲಾ ಅವರನ್ನು ಬಂಧಿಸಿರುವ ಕೇರಳ ಪೊಲೀಸರ ನಡೆಯನ್ನು ಖಂಡಿಸಿ ಶಬರಿಮಲೆ ಕ್ರಿಯಾ ಸಮಿತಿ ಇಂದು ಕೇರಳದಾದ್ಯಂತ ಬಂದ್ ಗೆ ಕರೆ ನೀಡಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ. ಕಳೆದ ರಾತ್ರಿ ಸನ್ನಿಧಾನಂ ಬಳಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಕೆಪಿ ಶಶಿಕಲಾ ಅವರನ್ನು ಪೊಲೀಸರು ಮರಕ್ಕೊಟ್ಟಂ ಬಳಿ ಬಂಧಿಸಿದ್ದರು.
ಹಿಂದು ಐಕ್ಯ ವೇದಿ ಸಂಘಟನೆಯ ರಾಜ್ಯ ಅಧ್ಯಕ್ಷೆ ಕೆ.ಪಿ.ಶಶಿಕಲಾ ತಮಗೆ 50ರ ಮೇಲ್ಪಟ್ಟು ವಯಸ್ಸಾಗಿದೆ ಎಂದು ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಇರುಮುಡಿ ಕೆಟ್ಟು ಹೊತ್ತು ನಿನ್ನೆ ರಾತ್ರಿಯೇ ಆಗಮಿಸಿದ್ದರು. ನಿಷೇಧಾಜ್ಞೆ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗ್ಗೆ 6ಗಂಟೆಯಿಂದಲೇ ಬಂದ್​ಗೆ ಕರೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com