ನವದೆಹಲಿ: 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 88 ಜನರಿಗೆ ವಿಚಾರಣಾ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿದೆ.
1984ರಲ್ಲಿ ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಮನೆಗಳನ್ನು ಸುಟ್ಟು ಹಾಕಿದ್ದ ಈ 88 ಅಪರಾಧಿಗಳಿಗೆ ವಿಚಾರಣಾ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯವನ್ನು ವಜಾಗೊಳಿಸಿದ ಹೈಕೋರ್ಟ್, ನಾಲ್ಕು ವಾರಗಳಲ್ಲಿ ಕೋರ್ಟ್ ಗೆ ಶರಣಾಗುವಂತೆ ಸೂಚಿಸಿದೆ.
ನವೆಂಬರ್ 20ರಂದು ಸಿಖ್ ದಂಗೆಯಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸದಂತೆ ದೆಹಲಿ ಕೋರ್ಟ್ ಯಶಪಾಲ್ ಸಿಂಗ್ ಗೆ ಗಲ್ಲು ಶಿಕ್ಷೆ ಹಾಗೂ ನರೇಶ್ ಶೇರಾವತ್ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಯಶಪಾಲ್ ಸಿಂಗ್ ಹಾಗೂ ನರೇಶ್ ಶೇರಾವತ್ ದೆಹಲಿಯ ಮಹಿಪಾಲಪುರದಲ್ಲಿ ಇಬ್ಬರು ಸಿಖ್ ಯುವಕರ ಮೇಲೆ ಹಲ್ಲೆ ನಡೆಸಿದ್ದರು. ನಂತರ ನವೆಂಬರ್ 1, 1984ರಂದು ಇಬ್ಬರೂ ಮೃತಪಟ್ಟಿದ್ದರು. ಹರದೇವ್ ಸಿಂಗ್ ಹಾಗೂ ಅವತಾರ್ ಸಿಂಗ್ ಮೃತ ದುರ್ದೈವಿಗಳು.