ಕೋಲ್ಕತಾ: ರೋಹಿಂಗ್ಯ ನಿರಾಶ್ರಿತರನ್ನು ಗುರುತಿಸಿ ಅವರ ಬಯೋಮೆಟ್ರಿಕ್ ವಿವರ ಸಂಗ್ರಹಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ರಾಜ್ಯಗಳು ಸಂಗ್ರಹಿಸುವ ಬಯೋಮೆಟ್ರಿಕ್ ವಿವರವನ್ನು ಕೇಂದ್ರ ಸರ್ಕಾರ ರಾಯಭಾರ ಕಚೇರಿಯ ಮೂಲಕ ಮ್ಯಾನ್ಮಾರ್ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ರಾಜನಾಥ್ ಸಿಂಗ್ ಅವರು ಇಂದು ಕೋಲ್ಕತಾದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಸೇರಿದಂತೆ ಅಂತರ-ರಾಜ್ಯ ಸಂಬಂಧಗಳು ಮತ್ತು ಭದ್ರತಾ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಪೂರ್ವ ವಲಯ ಸಮಿತಿ ಸಭೆ ನಡೆಸಿದರು.
ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್, ಬಿಹಾರ ಉಪ ಮುಖ್ಯಮಂತ್ರಿ ಸುಶಿಲ್ ಕುಮಾರ್ ಮೋದಿ ಹಾಗೂ ಒಡಿಶಾದ ಹಣಕಾಸು ಸಚಿವ ಶಶಿಭೂಷಣ್ ಬೆಹೆರಾ ಅವರು ಭಾಗವಹಿಸಿದ್ದರು.