ಹೈದರಾಬಾದ್: ವಿಜಯದಶಮಿ ಅಂಗವಾಗಿ ಭಾಷಣ ಮಾಡಿದ್ದ ಮೋಹನ್ ಭಾಗ್ವತ್ ರಾಮ ಮಂದಿರದ ಬಗ್ಗೆ ಮಾತನಾಡಿದ್ದರು. ಈ ಬೆನ್ನಲ್ಲೇ ಅಸಾವುದ್ದೀನ್ ಓವೈಸಿ ಭಾಗ್ವತ್ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದ ಆತ್ಮಗೌರವದ ದೃಷ್ಟಿಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅನಿವಾರ್ಯ ಎಂದಿದ್ದ ಮೋಹನ್ ಭಾಗ್ವತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಓವೈಸಿ, " ನಿಮ್ಮನ್ನು ಹಾಗೂ ನಿಮ್ಮ ಸರ್ಕಾರವನ್ನು ಮಂದಿರ ಕಟ್ಟದಂತೆ ತಡೆದಿರುವವರಾದರೂ ಯಾರು ಎಂದು ಪ್ರಶ್ನಿಸಿದ್ದಾರೆ.
ಮೋಹನ್ ಭಾಗ್ವತ್ ಅವರ ಹೇಳಿಕೆ ದೇಶ ಏಕಚಕ್ರಾಧಿಪತ್ಯಕ್ಕೆ ಸಿಲುಕಿರುವ ಅತ್ಯುತ್ತಮ ಉದಾಹರಣೆ, ಬಿಜೆಪಿ ಹಾಗೂ ಆರ್ ಎಸ್ಎಸ್ ಏಕಚಕ್ರಾಧಿಪತ್ಯದಲ್ಲಿ, ನಿರಂಕುಶವಾದದಲ್ಲಿ ನಂಬಿಕೆ ಹೊಂದಿದೆ. ಬಿಜೆಪಿ ಹಾಗೂ ಆರ್ ಎಸ್ಎಸ್ ನಾಯಕರಿಗೆ ಬಹುತ್ವ ಹಾಗೂ ಕಾನೂನಿನ ಮೇಲೆ ನಂಬಿಕೆ ಇಲ್ಲ ಎಂದು ಓವೈಸಿ ಹೇಳಿದ್ದಾರೆ.
ಸರ್ಕಾರ ಯಾವುದೇ ನಿರ್ದಿಷ್ಟ ಧರ್ಮಕ್ಕೆ ಅನುಗುಣವಾಗಿ ನಡೆಯುವುದಕ್ಕೆ ಸಾಧ್ಯವಿಲ್ಲ ಹಾಗೆ ಒಂದು ವೇಳೆ ಆದರೆ ಅದು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಗೆ ಈ ಬಗ್ಗೆ ತಿಳುವಳಿಕೆ ಇಲ್ಲ ಎಂದು ಓವೈಸಿ ಟೀಕಿಸಿದ್ದಾರೆ.