ಶತ್ರುಗಳ ಯತ್ನ ವಿಫಲಗೊಳಿಸಲು ಸದಾಕಾಲ ಸಿದ್ಧರಾಗಿರಿ: ಯೋಧರಿಗೆ ರಕ್ಷಣಾ ಸಚಿವೆ
ಪೊಲೀಸರ ಕುಟುಂಬಸ್ಥರ ಅಪಹರಣ ಪ್ರಕರಣ ಹಾಗೂ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಕದನ ವಿರಾಮದಂತದ ಘಟನೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶತ್ರುಗಳ ಯತ್ನಗಳನ್ನು ವಿಫಲಗೊಳಿಸಲು ಸದಾಕಾಲ ಸಿದ್ಧರಿರುವಂತೆ...
ಶ್ರೀನಗರ: ಪೊಲೀಸರ ಕುಟುಂಬಸ್ಥರ ಅಪಹರಣ ಪ್ರಕರಣ ಹಾಗೂ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಕದನ ವಿರಾಮದಂತದ ಘಟನೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶತ್ರುಗಳ ಯತ್ನಗಳನ್ನು ವಿಫಲಗೊಳಿಸಲು ಸದಾಕಾಲ ಸಿದ್ಧರಿರುವಂತೆ ಭಾರತೀಯ ಯೋಧರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಹೇಳಿದ್ದಾರೆ.
ಉಗ್ರರ ವಿರುದ್ಧ ಸೇನಾಪಡೆಗಳು ನಡೆಯುತ್ತಿರುವ ಕಾರ್ಯಾಚರಣೆಗಳನ್ನು ಪರಿಶೀಲನೆ ನಡೆಸಲು ಕಾಶ್ಮೀರಕ್ಕೆ ಭೇಟಿ ನೀಡಿರುವ ನಿರ್ಮಲಾ ಸೀತಾರಾನ್ ಅವರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸಾಥ್ ನೀಡಿದ್ದಾರೆ.
ಶ್ರೀನಗರಕ್ಕೆ ಬಂದಿಳಿದ ಸೀತಾರಾಮನ್ ಅವರು, ಉತ್ತರ ಸೇನಾಪಡೆ ಮುಖ್ಯಸ್ಥ ಲೆ.ಜ.ರನ್ಬೀರ್ ಸಿಂಗ್ ಮತ್ತು ಸೇನಾಧಿಕಾರಿ, 15ಕಾರ್ಪ್ಸ್, ಲೆ.ಜ.ಎ.ಕೆ. ಭಟ್ ಅವರೊಂದಿಗೆ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ತೆರಳಿ ಪರಿಶೀಲನೆ ನಡೆಸಿದರು.
ಸೀತಾರಾಮನ್ ಅವರಿಗೆ ಸೇನಾ ಕಮಾಂಡರ್ ಗಳು ಕಾರ್ಯಾಚರಣೆಗಳ ಕುರಿತಂತೆ ಮಾಹಿತಿ ನೀಡಿದರು. ರಕ್ಷಣಾ ವಕ್ತಾರ ಕಲೋನೆಲ್ ರಾಜೇಶ್ ಕಾಲಿಯಾ ಅವರು ಹೇಳಿದ್ದಾರೆ.
ಯೋಧರೊಂದಿಗೆ ಮಾತುಕತೆ ನಡೆಸಿದ ರಕ್ಷಣಾ ಸಚಿವೆ, ಯೋಧರು ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಕೊಂಡಾಡಿದರು. ಅಲ್ಲದೆ, ಉಗ್ರರ ಯತ್ನಗಳನ್ನು ವಿಫಲಗೊಳಿಸಲು ಸದಾಕಾಲ ಸಿದ್ಧರಿರುವಂತೆ ಸೂಚಿಸಿದರು.
ಬಳಿಕ ಸೇನಾ ಮುಖ್ಯಸ್ಥರು ಹಾಗೂ ರಾಜ್ಯಪಾಲ ಸತ್ಯಪಾಲ್ ಮಲಿಕ್'ರೊಂದಿಗೆ ಮಾತುಕತೆ ನಡೆಸಿದ ಅವರು ರಾಜಕೀಯ ಹಾಗೂ ಭದ್ರತಾ ಪರಿಸ್ಥಿತಿಗಳ ಕುರಿತಂತೆ ಮಾತುಕತೆ ನಡೆಸಿದರು ಎಂದು ಜಮ್ಮು ಮತ್ತು ಕಾಶ್ಮೀರ ರಾಜಭವನದ ವಕ್ತಾರರು ಮಾಹಿತಿ ನೀಡಿದ್ದಾರೆ.