ನವದೆಹಲಿ: ಕಾಂಗ್ರೆಸ್ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ 2014ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಪ್ರತಿಪಕ್ಷದ ಪಾತ್ರ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಗಳ ಬಣ್ಣ ಬಯಲಾಗಿದೆ. ಈ ಹಿಂದೆ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಅನ್ನು ಜನ ಅಧಿಕಾರದಿಂದ ಕಿತ್ತುಹಾಕಿದ್ದರು. ಈಗ ಪ್ರತಿಪಕ್ಷವಾಗಿಯೂ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನ ತಳಮಟ್ಟದ ಕಾರ್ಯಕರ್ತರ ಹೋರಾಟದಿಂದ ಕೇವಲ ಒಂದು ಕುಟುಂಬಕ್ಕೆ ಲಾಭವಾಗಿದೆ ಎಂದು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ನೈತಿಕ ಕೆಲಸದ ಆಧಾರದ ಮೇಲೆ ಬಿಜೆಪಿ ನಾಯಕತ್ವವನ್ನು ಆಯ್ಕೆ ಮಾಡಲಾಗುತ್ತದೆ. ಸಂಬಂಧದಿಂದ ಅಲ್ಲ. ಬಿಜೆಪಿಗೆ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್'ದಲ್ಲಿ ನಂಬಿಕೆ ಇದೆ ಎಂದು ಪ್ರಧಾನಿ ಹೇಳಿದರು.