ಭಾರತ ಬಿಡುವ ಮುನ್ನ ಹಣಕಾಸು ಸಚಿವರ ಭೇಟಿ: ನಾನು ರಾಜಕೀಯ ಬಲಿಪಶು- ಮಲ್ಯ
ನವದೆಹಲಿ : 2016 ರಲ್ಲಿ ದೇಶ ತೊರೆಯುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದೆ ಎಂದು ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಜಯ್ ಮಲ್ಯ ಅವರ ಹೇಳಿಕೆಯನ್ನು ತಳ್ಳಿ ಹಾಕಿರುವ ಸಚಿವ ಅರುಣ್ ಜೇಟ್ಲಿ, 2014ರ ನಂತರ ವಿಜಯ್ ಮಲ್ಯ ಅವರ ಭೇಟಿಗೆ ಅವಕಾಶ ನೀಡಿಯೇ ಇಲ್ಲ. ಆದರೆ, ದೇಶಭ್ರಷ್ಟ ಮದ್ಯ ಉದ್ಯಮಿ ತಮ್ಮ ರಾಜಸ್ಯಭಾ ಸದಸ್ಯತ್ವ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯಸಭಾ ಸದಸ್ಯರಾಗಿದ್ದ ವಿಜಯ್ ಮಲ್ಯ ಅವರು ಒಂದು ದಿನ ಕಲಾಪ ಮುಗಿದ ಬಳಿಕ ನಾನು ನನ್ನ ಕೋಣೆ ಹೋಗುತ್ತಿದ್ದಾಗ ಅವರು ನನ್ನನ್ನು ತಡೆದು ಸೆಟ್ಲಮೆಂಟ್ ಪ್ರಸ್ತಾಪ ಮಾಡಿದ್ದರು. ಆದರೆ ನಾನು ಅವರೊಂದಿಗೆ ಮಾತುಕತೆ ಮುಂದುವರೆಸದೆ, ಬ್ಯಾಂಕ್ ಗಳೊಂದಿಗೆ ಇತ್ಯರ್ಥ ಮಾಡಿಕೊಳ್ಳಿ ಎಂದು ಹೇಳಿದ್ದೆ. ಅಲ್ಲದೆ ಅವರ ಬಳಿ ಇದ್ದ ಪೇಪರ್ ಗಳನ್ನು ಸಹ ನಾನು ಸ್ವೀಕರಿಸಲಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
ಅರುಣ್ ಜೇಟ್ಲಿ ಅವರ ಈ ಹೇಳಿಕೆ ಬಳಿಕ ಪ್ರತಿಕ್ರಿಯಿಸಿರುವ 62 ವರ್ಷದ ವಿಜಯ್ ಮಲ್ಯ, ಜಿನಿವಾಕ್ಕೆ ತೆರಳುವ ಮುನ್ನ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ, ಬ್ಯಾಂಕ್ ಸೆಟ್ಲಮೆಂಟ್ ಮಾಡಿಕೊಡಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಇದು ಸತ್ಯ ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ನಾನು ರಾಜಕೀಯ ಪುಟ್ಬಾಲ್ ರೀತಿಯಲ್ಲಿ ಆಗಿದ್ದೇನೆ. ನನ್ನ 15 ಸಾವಿರ ಕೋಟಿ ರೂಪಾಯಿ ಆಸ್ತಿಮೌಲ್ಯದ ವಿಚಾರ ಕರ್ನಾಟಕದ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದ್ದು, ಎಲ್ಲಾ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವುದಾಗಿ ಮಲ್ಯ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಜಯ್ ಮಲ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ನನ್ನನ್ನು ಇಷ್ಟಪಡುತ್ತಿಲ್ಲ, ನಾನು ರಾಜಕೀಯ ಬಲಿಪಶುವಾಗಿದ್ದೇನೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ