ಹೈದರಾಬಾದ್: ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್)ಯ ಕಮ್ಮಮ್ ಸಂಸದ ಪೊನಗುಲೆತಿ ಶ್ರೀನಿವಾಸ್ ರೆಡ್ಡಿ ಅವರ ನಿವಾಸ ಮತ್ತು ಬ್ಯುಸಿನೆಸ್ ಕಚೇರಿಗಳ ಮೇಲೆ ಮಂಗಳವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲಿಸುತ್ತಿದ್ದಾರೆ.
ಶ್ರೀನಿವಾಸ್ ರೆಡ್ಡಿ ಅವರ ಹೈದರಾಬಾದ್ ಮತ್ತು ಕಮ್ಮಮ್ ನಿವಾಸ ಹಾಗೂ ಬಂಜಾರ ಹಿಲ್ಸ್ ನಲ್ಲಿರುವ ರಾಘವ ಕನ್ಸ್ಟ್ರಕ್ಸನ್ ನ ಮುಖ್ಯ ಕಚೇರಿ ಸೇರಿದಂತೆ 16 ಕಡೆ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ.
ಶ್ರೀನಿವಾಸ್ ರೆಡ್ಡಿ ಅವರ ಸಹೋದರ ಪೊನಗುಲೆತಿ ಪ್ರಸಾದ್ ರೆಡ್ಡಿ ಅವರು ರಾಘವ ಕನ್ಸ್ಟ್ರಕ್ಸನ್ ಅಧ್ಯಕ್ಷರಾಗಿದ್ದು, ಸಂಸದರ ಪತ್ನಿ, ಪುತ್ರ ಮತ್ತು ಪುತ್ರಿ ನಿರ್ದೇಶಕರಾಗಿದ್ದಾರೆ.
ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಟಿಆರ್ ಎಸ್ ಸಂಸದರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಸಂಜೆಯವರೆಗೆ ದಾಳಿ ಮುಂದುವರೆಯುವ ಸಾಧ್ಯತೆ ಇದೆ.
ತೆಲಂಗಾಣ ವಿಧಾನಸಭೆ ಚುನಾವಣೆ ಎದುರಿಸುತ್ತಿರುವುದರಿಂದ ಟಿಆರ್ ಎಸ್ ಸಂಸದರ ಮೇಲಿನ ಐಟಿ ದಾಳಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.