ಗ್ವಾಲಿಯಾರ್(ಮಧ್ಯಪ್ರದೇಶ): ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದ್ದ ಯುವಕರು ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗುತ್ತಿರುವ ವಿಡಿಯೋ ಭಯಾನಕವಾಗಿದೆ.
ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಕೆರೆಯಲ್ಲಿ ಯುವಕರು ಗಣಪತಿ ವಿಸರ್ಜನೆಗೆ ತೆರಳಿದ್ದಾರೆ. ಈ ವೇಳೆ ನಾಲ್ವರು ಯುವಕರು ಕೆರೆಯಲ್ಲಿ ಮುಳುಗಿದ್ದಾರೆ. ಇದನ್ನು ಸ್ಥಳೀಯೊಬ್ಬರು ಚಿತ್ರೀಕರಿಸಿದ್ದು ವಿಡಿಯೋ ದೃಶ್ಯಗಳು ಎದೆ ನಡುಗಿಸುತ್ತದೆ.
ಮೃತರನ್ನು ಅಜಯ್ ಪಾಲ್, ಸತೀಶ್ ಬಾಘೆಲ್, ಸೂರಜ್ ಪಾಲ್ ಹಾಗೂ ಶುಭಂ ಗೌರ್ ಎಂದು ಗುರುತಿಸಲಾಗಿದೆ. ಮಹಾರಾಜಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗಣಪತಿ ಮೂರ್ತಿಯನ್ನು ಮುಳುಗಿಸಲು ಕೊಂಚ ದೂರ ತೆರಳಿದ್ದ ಯುವಕರಲ್ಲಿ ಇಬ್ಬರು ಅಲ್ಲೇ ಮುಳುಗಿದ್ದಾರೆ. ಇವರ ರಕ್ಷಣೆಗಾಗಿ ಬಂದ ಮತ್ತಿಬ್ಬರು ಯುವಕರು ಸಹ ಮುಳುಗಿದ್ದಾರೆ. ನೋಡ ನೋಡುತ್ತಿದ್ದಂತೆ ನಾಲ್ವರು ಯುವಕರು ಜಲಸಮಾಧಿಯಾಗಿದ್ದಾರೆ.