ನವದೆಹಲಿ: ಚೀನಾ ವಿರುದ್ಧದ ಟಿಬೆಟಿಯನ್ ಹೋರಾಟಕ್ಕೆ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ತಮಗೆ ಅತ್ಯುತ್ತಮ ಸಲಹೆ ನೀಡಿದ್ದರು ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ.
ನೆಹರೂ ಅವರ ಅತ್ಯುತ್ತಮ ಸಲಹೆಯಂತೆ ಅಮೆರಿಕ ಪಡೆಗಳು ಟಿಬೆಟ್ನಿಂದ ಚೀನಾ ಪಡೆಗಳನ್ನು ಹೊರದಬ್ಬಲು ಸಾಧ್ಯವಾಗಲಿಲ್ಲ. ತಡವಾದರೂ ಚೀನಾ ಸರ್ಕಾರದ ಜೊತೆ ಚರ್ಚಿಸಿ ಎಂದು ನೆಹರೂ ತಮಗೆ ಹೇಳಿದ್ದರು. ವಿಶ್ವಸಂಸ್ಥೆಯಲ್ಲಿ ಟಿಬೆಟಿಯನ್ ವಿಷಯ ಪ್ರಸ್ತಾಪಿಸುವುದರಿಂದ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ ಎಂದು ದಲೈಲಾಮ ಹೇಳಿದ್ದಾರೆ.
ಗುರುವಾರ ದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ನೆಹರೂ ಅವರ ಸಲಹೆಯಂತೆ ನಾವು ಸ್ವಾತಂತ್ರ್ಯ ಪಡೆಯಲು ಪ್ರಯತ್ನಿಸಲಿಲ್ಲ. ಪರಸ್ಪರ ಪರಿಹಾರೋಪಾಯ ಕಂಡುಕೊಳ್ಳಲು ಯತ್ನಿಸಲಾಯಿತು. ನಂತರ 1970ರಲ್ಲಿ ಚೀನಾ ಸರ್ಕಾರದೊಂದಿಗೆ ನೇರ ಸಂಪರ್ಕ ಬೆಳೆಸಲಾಯಿತು ಎಂದು ದಲೈಲಾಮ ಹೇಳಿದ್ದಾರೆ.
ಕಳೆದ ಆಗಸ್ಟ್ನಲ್ಲಿ ದಲೈಲಾಮ ಅವರು, ನೆಹರೂ ಅವರನ್ನು ಸ್ವಯಂ ಕೇಂದ್ರಿತ ವ್ಯಕ್ತಿ ಎಂದು ಹೇಳಿದ್ದರು. ನೆಹರೂ ಇಚ್ಛಿಸಿದ್ದರೆ ಭಾರತ ಇಬ್ಭಾಗವಾಗುತ್ತಿರಲಿಲ್ಲ ಎಂದು ಹೇಳಿದ್ದರು. ಎರಡು ದಿನಗಳ ನಂತರ ತಮ್ಮ ಈ ಹೇಳಿಕೆ ಕುರಿತು ದಲೈಲಾಮ ಕ್ಷಮೆ ಕೋರಿದ್ದರು.
1959ರಲ್ಲಿ ಟಿಬೆಟ್ನಲ್ಲಿ ಹೋರಾಟ ಆರಂಭವಾದ ನಂತರ ದಲೈಲಾಮ ಮತ್ತು ಅವರ ಅನುಯಾಯಿಗಳು ಭಾರತದಲ್ಲಿ ಆಶ್ರಯಪಡೆದಿದ್ದಾರೆ.