ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೊಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಉಲ್ಟಾ ಹೊಡೆದಿದ್ದಾನೆ. ಇಡಿ(ಜಾರಿ ನಿರ್ದೇಶನಾಲಯ) ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿರುವಂತೆ ನಾನು ಯಾರೊಬ್ಬರ ಹೆಸರನ್ನೂ ತನಿಖಾಧಿಕಾರಿಗಳ ಮುಂದೆ ಹೇಲೀಲ್ಲ ಎಂದು ಮೈಕೆಲ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಕೇಂದ್ರ ಸರ್ಕಾರ ರಾಜಕೀಯ ತಂತ್ರಗಾರಿಕೆಗಳಿಗೆ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಮೈಕೆಲ್ ಆರೋಪಿಸಿದ್ದಾನೆ. ಇದೇ ವೇಳೆ ಮೈಕೆಲ್ ಪರ ವಕೀಲರು ಇಡಿ ಅಧಿಕಾರಿಗಳು ಚಾರ್ಜ್ ಶೀಟ್ ಪ್ರತಿಯನ್ನು ಮೈಕೆಲ್ ಗೆ ಒದಗಿಸುವುದಕ್ಕೆ ಮುನ್ನ ಮಾದ್ಯಮಗಳಿಗೆ ನೀಡಿದ್ದಾರೆ ಎಂದು ಆಪಾದಿಸಿದರು.
ಮೈಕೆಲ್ ಪರ ಅರ್ಜಿ ಸಲ್ಲಿಸಿದ ವಕೀಲಾಲ್ಜೋ ಕೆ. ಜೋಸೆಫ್ "ಮೈಕೆಲ್ ಯಾರ ಹೆಸರನ್ನು ಎಂದಿಗೂ ಹೇಳಿಲ್ಲ" ಎಂದಿದ್ದಾರೆ. ಅಲ್ಲದೆ ಮೈಕೆಲ್ ಗೆ ಅರಿವಿಗೆ ಬರುವ ಮುನ್ನವೇ ಚಾರ್ಜ್ ಶೀಟ್ ನಲ್ಲಿನ ವಿಚಾರಗಳು ಮಾದ್ಯಮದಲ್ಲಿ ಹೇಗೆ ಬಿತ್ತರವಾಗಿದೆ ಎಂದು ವಕೀಲರು ಪ್ರಶ್ನಿಸಿದ್ದಾರೆ.