ನವದೆಹಲಿ: ಯಾವುದಾದರೊಂದು ಪ್ರಕರಣದಲ್ಲಿ ರಾಜಕೀಯ ವಿಚಾರ ಸೇರ್ಪಡೆಯಾಗದಿದ್ದರೆ ತನಿಖಾ ಸಂಸ್ಥೆ ಸಿಬಿಐ ಏಕೆ ಉತ್ತಮ ಕೆಲಸ ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪ್ರಶ್ನಿಸಿದ್ದಾರೆ.
ಸಿಬಿಐ ನಿನ್ನೆ ದೆಹಲಿಯಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಬಿಐ ಸಂಸ್ಥೆಯ ಶಕ್ತಿ ಮತ್ತು ನ್ಯೂನತೆಗಳನ್ನು ತೋರಿಸುವ ಬದಲಾಗಿ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದನ್ನು ಯೋಚಿಸೋಣ ಎಂದು ಹೇಳಿದರು.
ಅತಿ ಉನ್ನತ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ರಾಜಕೀಯ ಸೂಕ್ಷ್ಮ ಕೇಸುಗಳಲ್ಲಿ ಸಿಬಿಐಯಿಂದ ನ್ಯಾಯಾಂಗ ಪರಿಶೀಲನೆಯ ಮಾನದಂಡಗಳ ಮಟ್ಟದಲ್ಲಿ ತೀರ್ಪು ನೀಡಲು ಸಾಧ್ಯವಾಗಿಲ್ಲ ಎಂಬುದು ಸತ್ಯ. ಅಂತಹ ಲೋಪಗಳು ವಿರಳವೇನಲ್ಲ, ಹಲವು ಬಾರಿ ಆಗಿದೆ ಎಂಬುದು ಕೂಡ ಅಷ್ಟೇ ಸತ್ಯ ಎಂದರು. ಅಂತಹ ನಿದರ್ಶನಗಳು ವ್ಯವಸ್ಥಿತ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತವೆ. ಸಾಂಸ್ಥಿಕ ಆಕಾಂಕ್ಷೆಗಳು, ಸಾಂಸ್ಥಿಕ ವಿನ್ಯಾಸ, ಕಾರ್ಯನಿರತ ಸಂಸ್ಕೃತಿ ಮತ್ತು ಆಡಳಿತ ರಾಜಕೀಯಗಳನ್ನು ಪ್ರತಿಬಿಂಬಿಸುತ್ತವೆ ಎಂದರು.
Advertisement