ಐ ಕೆ ಗುಜ್ರಾಲ್
ಐ ಕೆ ಗುಜ್ರಾಲ್

ನರಸಿಂಹ ರಾವ್ ಗುಜ್ರಾಲ್ ಸಲಹೆ ಕೇಳಿದ್ದರೆ 1984ರ ಹತ್ಯಾಕಾಂಡ ತಪ್ಪಿಸಬಹುದಾಗಿತ್ತು: ಡಾ ಮನಮೋಹನ್ ಸಿಂಗ್ 

ಅಂದಿನ ಗೃಹ ಸಚಿವ ನರಸಿಂಹ ರಾವ್ ಅವರು ಐ ಕೆ ಗುಜ್ರಾಲ್ ಅವರ ಸಲಹೆಯನ್ನು ಕೇಳುತ್ತಿದ್ದರೆ 1984ರ ಹತ್ಯಾಕಾಂಡವನ್ನು ತಡೆಯಬಹುದಾಗಿತ್ತು ಎಂದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಹೇಳಿದ್ದಾರೆ.
Published on

ನವದೆಹಲಿ: ಅಂದಿನ ಗೃಹ ಸಚಿವ ಪಿ ವಿ ನರಸಿಂಹ ರಾವ್ ಅವರು ಐ ಕೆ ಗುಜ್ರಾಲ್ ಅವರ ಸಲಹೆಯನ್ನು ಕೇಳುತ್ತಿದ್ದರೆ 1984ರ ಹತ್ಯಾಕಾಂಡವನ್ನು ತಡೆಯಬಹುದಾಗಿತ್ತು ಎಂದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಹೇಳಿದ್ದಾರೆ.


ಮಾಜಿ ಪ್ರಧಾನಿ ದಿವಂಗತ ಐ ಕೆ ಗುಜ್ರಾಲ್ ಅವರ 100ನೇ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1984ರ ಹತ್ಯಾಕಾಂಡ ನಡೆದ ಸಮಯದಲ್ಲಿ ಗುಜ್ರಾಲ್ ಅವರು ಅಂದಿನ ಗೃಹ ಸಚಿವ ನರಸಿಂಹ ರಾವ್ ಅವರ ಬಳಿ ಹೋಗಿ ಪರಿಸ್ಥಿತಿ ತುಂಬಾ ಬಿಗಿಯಾಗಿದೆ. ಆದಷ್ಟು ಬೇಗ ಸೇನೆಯನ್ನು ಕಾರ್ಯಪ್ರವೃತ್ತವಾಗಿಸಿ ಎಂದಿದ್ದರು. ಅಂದು ಗುಜ್ರಾಲ್ ಅವರ ಮಾತುಗಳನ್ನು ಕೇಳುತ್ತಿದ್ದರೆ 1984ರ ಹತ್ಯಾಕಾಂಡವನ್ನು ತಪ್ಪಿಸಬಹುದಾಗಿತ್ತು ಎಂದು ನೆನಪಿಸಿಕೊಂಡರು.


ತುರ್ತು ಪರಿಸ್ಥಿತಿ ನಂತರ ತಮ್ಮ ಹಾಗೂ ಗುಜ್ರಾಲ್ ನಡುವಿನ ಸಂಬಂಧ ಬೆಳೆದ ಬಗ್ಗೆ ಮಾತನಾಡಿದರು. ಅಂದು ಅವರು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು. ತುರ್ತು ಪರಿಸ್ಥಿತಿಯ ವ್ಯವಸ್ಥಾಪಕರ ಜೊತೆ ಅವರು ಕೆಲ ಭಿನ್ನಾಭಿಪ್ರಾಯ ಹೊಂದಿದ್ದರು. ಹೀಗಾಗಿ ಅವರನ್ನು ಯೋಜನಾ ಆಯೋಗದ ರಾಜ್ಯ ಖಾತೆ ಸಚಿವರಾಗಿ ವರ್ಗಾಯಿಸಲಾಗಿತ್ತು. ಆ ಹೊತ್ತಿನಲ್ಲಿ ನಾನು ಹಣಕಾಸು ಸಚಿವಾಲಯದ ಆರ್ಥಿಕ ಸಲಹೆಗಾರನಾಗಿದ್ದೆ. ನಂತರದ ದಿನಗಳಲ್ಲಿ ನಮ್ಮ ಸ್ನೇಹ ಬೆಳೆಯಿತು ಎಂದು ಮನಮೋಹನ್ ಸಿಂಗ್ ಸ್ಮರಿಸಿದರು.


ಐ ಕೆ ಗುಜ್ರಾಲ್ ಅವರು ದೇಶದ 12ನೇ ಪ್ರಧಾನಿಯಾಗಿ ಏಪ್ರಿಲ್ 1997ರಿಂದ ಮಾರ್ಚ್ 1998ರವರೆಗೆ ಪ್ರಧಾನಿಯಾಗಿದ್ದರು. ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹ ಇರಿಸಿಕೊಂಡಿದ್ದ ಹಿನ್ನಲೆಯಲ್ಲಿ ಐದು ತತ್ವಗಳ ಗುಜ್ರಾಲ್ ಆಡಳಿತ ಎಂದು ಸುದ್ದಿಯಾಗಿತ್ತು.


1975ರ ಹೊತ್ತಿನಲ್ಲಿ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವನಾಗಿ ಐ ಕೆ ಗುಜ್ರಾಲ್ ಹಲವು ಕೆಲಸಗಳನ್ನು ಮಾಡಿದ್ದರು. ಐ ಕೆ ಗುಜ್ರಾಲ್ ಬಹು ಅಂಗಾಂಗ ವೈಫಲ್ಯದಿಂದ 2012ರ ನವೆಂಬರ್ 30ರಂದು ನಿಧನರಾದರು. 92ನೇ ವಯಸ್ಸಿನಲ್ಲಿ ತಮ್ಮ 93ನೇ ಹುಟ್ಟುಹಬ್ಬದ ನಾಲ್ಕು ದಿನಗಳ ಮೊದಲಷ್ಟೇ ನಿಧನರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com