ನವದೆಹಲಿ: ಬಡ ಕುಟುಂಬವೊಂದು ದಿನಕ್ಕೆ 20 ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡಲು ಹೇಗೆ ಸಾಧ್ಯ ಎಂಬ ಗಂಭೀರ ಪ್ರಶ್ನೆಯನ್ನು ಸಿಎಜಿ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ವರದಿ ಎತ್ತಿದೆ.
ಹೌದು.. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಬಡವರಿಗೆ ಅಡುಗೆ ಅನಿಲ ನೀಡುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ದುರ್ಬಳಕೆ ಆಗುತ್ತಿರುವುದಾಗಿ ಸಿಎಜಿ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ವರದಿ ಮಾಡಿದೆ. ವರದಿಯಲ್ಲಿರುವಂತೆ ದಿನವೊಂದರಲ್ಲಿ ಒಬ್ಬರೇ ಫಲಾನುಭವಿ ಹಲವು ಬಾರಿ ರೀಫಿಲ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, 2 ರಿಂದ 20 ಎಲ್ಪಿಜಿ ಸಿಲಿಂಡರ್ ಅನ್ನು ಒಂದು ದಿನದಲ್ಲಿ ಒಬ್ಬರೇ ಫಲಾನುಭವಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ವಿತರಿಸಲಾಗಿರುವ 3.44 ಲಕ್ಷ ಪ್ರಕರಣಗಳು ಕಂಡುಬಂದಿದೆ.
ಇದೇ ಕಾರಣಕ್ಕೆ ಗೃಹ ಬಳಕೆಯ ಅಂದರೆ ದೈನಂದಿನ ಹೆಚ್ಚಿನ ಬಳಕೆಯು ಸಾಮಾನ್ಯ ಗ್ರಾಹಕರಲ್ಲಿ ಸಾಧ್ಯವಿಲ್ಲದಿರುವುದರಿಂದ ಗೃಹ ಬಳಕೆಗಾಗಿ ನೀಡಲಾಗಿರುವ ಎಲ್ಪಿಜಿ ಸಂಪರ್ಕವು ವಾಣಿಜ್ಯಕ್ಕೆ ಬಳಕೆಯಾಗಿದೆ ಎಂದು ಸಿಎಜಿ ಸಂಶಯ ವ್ಯಕ್ತಪಡಿಸಿದೆ. ವಾಣಿಜ್ಯ ಎಲ್ಪಿಜಿ ರೀಫಿಲ್ ದರ ಅತ್ಯಧಿಕ ತೆರಿಗೆಯಿಂದ ಹೊರೆಯಾಗಿರುವ ಕಾರಣ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಗಳನ್ನೇ ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕವನ್ನು ಒದಗಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2016ರ ಮೇ ತಿಂಗಳಿನಲ್ಲಿ ಉದ್ಘಾಟನೆ ಮಾಡಲಾಯಿತು. ಹೊಗೆ ಮತ್ತು ಶುಚಿಯಲ್ಲದ ಇಂಧನದಿಂದ ಬಡವರನ್ನು ರಕ್ಷಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಯಿತು. 2020ರ ಗಡುವಿಗೂ ಏಳು ತಿಂಗಳು ಮುಂಚೆಯೇ 8 ಕೋಟಿ ಜನರಿಗೆ ಹೊಸ ಎಲ್ಪಿಜಿ ಸಂಪರ್ಕ ಕೊಡಿಸುವ ಮೂಲಕ ಯೋಜನೆ ಯಶಸ್ಸು ಸಾಧಿಸಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.
Advertisement