ದೇಶ
ಪ್ರಧಾನಿ ಮೋದಿ ಜೊತೆಯಲ್ಲಿ ದೇವಾಲಯ ಪ್ರವೇಶಿಸಲು ಬಿಡಲಿಲ್ಲ: ಶಶಿ ತರೂರ್
ಪ್ರಧಾನಿ ನರೇಂದ್ರ ಮೋದಿ ಕೇರಳದ ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾಗ ನಮ್ಮನ್ನು ದೇವಾಲಯ ಪ್ರವೇಶಿಸಲು ಬಿಡಲಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಕೇರಳದ ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾಗ ನಮ್ಮನ್ನು ದೇವಾಲಯ ಪ್ರವೇಶಿಸಲು ಬಿಡಲಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಪ್ರಧಾನಿ ಕಚೇರಿಯ ವಿರುದ್ಧ ಶಶಿ ತರೂರ್ ಟ್ವಿಟರ್ ನಲ್ಲಿ ಆರೋಪ ಮಾಡಿದ್ದು, ತಮ್ಮನ್ನು ಹಾಗೂ ತಮ್ಮ ಜೊತೆಗಿದ್ದ ಸ್ಥಳೀಯ ನಾಯಕರನ್ನು ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಪ್ರವೇಶಿಸಲು ಬಿಡಲಿಲ್ಲ ಎಂದು ಹೇಳಿದ್ದಾರೆ.
ಸ್ವದೇಶ್ ದರ್ಶನ್ ಯೋಜನೆ ಫಲಕವನ್ನು ಅನಾವರಣಗೊಳಿಸಲು ಪ್ರಧಾನಿ ಮೋದಿ ತಿರುವನಂತಪುರಂ ನ ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ಸ್ವಾಗತಿಸಿದ ಸ್ಥಳೀಯ ಸಂಸದ, ಶಾಸಕ, ಮೇಯರ್ ಮೋದಿ ಅವರೊಂದಿಗೇ ದೇವಾಲಯ ಪ್ರವೇಶಿಸುವವರಿದ್ದರು. ಆದರೆ ನಂತರದಲ್ಲಿ ನಮಗೆ ಅವಕಾಶ ಸಿಗಲಿಲ್ಲ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಜೊತೆಗೆ ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಶಶಿ ತರೂರ್ "ಬಿಜೆಪಿ ಆಡಳಿತದಲ್ಲಿ ದೇವರೂ ಸಹ ರಾಜಕೀಯ ಉದ್ದೇಶಗಳನ್ನು ಈಡೇರಿಸಬೇಕು ಹಾಗೂ ಪ್ರಧಾನಿ ಸಮ್ಮುಖದಲ್ಲಿ ಬೇರೆ ಪಕ್ಷದ ಸದಸ್ಯರು ಪೂಜೆ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಜ.15 ರಂದು ಪದ್ಮನಾಭ ದೇವಾಲಯಕ್ಕೆ ಭೇಟಿ ನೀಡಿದ್ದ ಮೋದಿ ಜೊತೆಗೆ ರಾಜ್ಯಪಾಲ ನ್ಯಾ.ಪಿ ಸದಾಶಿವಂ, ರಾಜ್ಯ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸಹ ದೇವಾಲಯಕ್ಕೆ ತೆರಳಿದ್ದರು. ಆದರೆ ಸ್ಥಳೀಯ ಸಂಸದ, ಶಾಸಕ, ಮೇಯರ್ ಗೆ ಅವಕಾಶ ನಿರಾಕರಿಸಲಾಗಿತ್ತು.