ನವದೆಹಲಿ: ಐಆರ್ಸಿಟಿಸಿ ಹಗರಣಗಳಿಗೆ ಸಂಬಂಧ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಜನವರಿ 28ರವರೆಗೆ ಮದ್ಯಂತರ ಜಾಮೀನು ವಿಸ್ತರಣೆ ಮಾಡಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅರುಣ್ ಭರದ್ವಾಜ್ ಲಾಲು ಪತ್ನಿ ರಾಬ್ರಿ ದೇವಿ ಹಾಗೂ ಮಗ ತೇಜಸ್ವಿ ಯಾದವ್ ಅವರ ಜಾಮೀನು ಅವಧಿಯನ್ನು ಸಹ ಜನವರಿ 28ರವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ.
ಅಂತೆಯೇ ಅದೇ ದಿನ ಲಾಲು ಹಾಗೂ ಇತರರ ಜಾಮೀನು ಅರ್ಜಿಯ ಕುರಿತಂತೆ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಲು ತೀರ್ಮಾನಿಸಿದೆ.
ಐಆರ್ಸಿಟಿಸಿ ಗೆ ಸೇರಿದ ಎರಡು ಹೋಟೆಲ್ ಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವುದರ ಕುರಿತಂತೆ ಅಕ್ರಮ ಮಂಜೂರಾತಿ ನೀಡಲಾಗಿದೆ ಎಂದು ಆರೋಪಿಸಿ ಲಾಲು ಪ್ರಸಾದ್ ಹಾಗೂ ಇತರರ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರಕರಣ ದಾಖಲಿಸಿದ್ದವು.