ವಿವಿಐಪಿ ಚಾಪರ್ ಖರೀದಿ ಹಗರಣ: ಆರೋಪಿ ಗೌತಮ್ ಖೇತಾನ್​ ಬಂಧನ

ಬಹುಕೋಟಿ ವಿವಿಐಪಿ ಚಾಪರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗೌತಮ್ ಖೇತಾನ್​ ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಬಹುಕೋಟಿ ವಿವಿಐಪಿ ಚಾಪರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗೌತಮ್ ಖೇತಾನ್​ ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದಾರೆ.
ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್​ ಖರೀದಿ ಹಗರಣದ ಆರೋಪಿಯಾಗಿದ್ದ ಆರೋಪಿ ಗೌತಮ್ ಖೇತಾನ್​ ರನ್ನು ಕಪ್ಪುಹಣ ಸಂಗ್ರಹದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಇಂದು ಬಂಧಿಸಿದೆ. ಗೌತಮ್​ ಖೇತಾನ್​ ಅಗಸ್ಟಾ ವೆಸ್ಟ್​ಲ್ಯಾಂಡ್​ ವಿವಿಐಪಿ ಚಾಪರ್​ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಕಾಳಧನ ಕಾಯ್ದೆಯಡಿ ಗೌತಮ್ ಖೇತಾನ್​ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಕ್ರಮವಾಗಿ ಸಾಕಷ್ಟು ಆಸ್ತಿಗಳನ್ನು ಸಂಪಾದಿಸಿರುವ ಗೌತಮ್​ ಅವರನ್ನು ಕಾಳಧನ ಕಾಯ್ದೆಯಡಿ ಬಂಧನ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಂತೆಯೇ  3,600 ಕೋಟಿ ರೂ. ಮೌಲ್ಯದ ಅಗಸ್ಟಾ ವೆಸ್ಟ್ ಲ್ಯಾಂಡ್​ ಹಗರಣದ ಬಗ್ಗೆ ಸಿಬಿಐ ಸಲ್ಲಿಸಿದ್ದ ಚಾರ್ಜ್​ಶೀಟ್​ನಲ್ಲಿದ್ದಆರೋಪಿಗಳ ಪಟ್ಟಿಯಲ್ಲಿ ಗೌತಮ್​ ಹೆಸರೂ ಇತ್ತು. ಉಳಿದಂತೆ, ಯುಪಿಎ ಸರ್ಕಾರದ ಅವಧಿಯ ಭಾರತೀಯ ನೌಕಾಸೇನೆಯ ಮುಖ್ಯಸ್ಥ ಎಸ್​.ಪಿ. ತ್ಯಾಗಿ, ತ್ಯಾಗಿ ಅವರ ಆಪ್ತ ಸಂಜೀವ್​ ತ್ಯಾಗಿ ಮತ್ತು ವಾಯುಸೇನೆಯ ಇನ್ನೋರ್ವ ಮುಖ್ಯಸ್ಥ ಜೆ.ಎಸ್​. ಗುಜ್ರಾಲ್​ ಅವರ ಹೆಸರು ಚಾರ್ಜ್ ಶೀಟ್ ನಲ್ಲಿತ್ತು. ​ 
ಕಳೆದ ವಾರ ಗೌತಮ್​ ಖೇತಾನ್​ಗೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಆಫೀಸ್​, ಇತರೆ ಪ್ರಾಪರ್ಟಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಸಾಕಷ್ಟು ಮಹತ್ವದ ಮಾಹಿತಿಗಳನ್ನು ಕಲೆಹಾಕಿತ್ತು. ಅಲ್ಲಿ ಸಿಕ್ಕಿದ ಮಾಹಿತಿಗಳ ಆಧಾರದಲ್ಲಿ ಖೈತಾನ್​ ಯುಪಿಎ ಅವಧಿಯಲ್ಲಿ ಅಗಸ್ಟಾ ವೆಸ್ಟ್​ಲ್ಯಾಂಡ್​ ಸೇರಿದಂತೆ ಹಲವು ರಕ್ಷಣಾ ಡೀಲ್​ಗಳಲ್ಲಿ ಭಾಗಿಯಾಗಿದ್ದು ತಿಳಿದುಬಂದಿತ್ತು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ 3,600 ಕೋಟಿ  ರೂ. ಮೌಲ್ಯದ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಸಂಬಂಧ ಹಲವರನ್ನು ಬಂಧಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಮತ್ತು ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್ ಮೈಕಲ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com