ನವದೆಹಲಿ: ಬಹುಕೋಟಿ ಅಗಸ್ತಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ವಕೀಲ ಗೌತಮ್ ಖೇತಾನ್ ಅವರನ್ನು ಶನಿವಾರ ದೆಹಲಿ ಕೋರ್ಟ್ ಎರಡು ದಿನ ಜಾರಿ ನಿರ್ದೇಶನಾಲಯ(ಇಡಿ)ದ ವಶಕ್ಕೆ ನೀಡಿದೆ.
ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿಯಾಗಿದ್ದ ಗೌತಮ್ ಖೇತಾನ್ ಅವರನ್ನು ಕಪ್ಪುಹಣ ಸಂಗ್ರಹ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬೆಳಗ್ಗೆ ಬಂಧಿಸಿದ್ದರು. ಬಳಿಕ ಆರೋಪಿಯನ್ನು ದೆಹಲಿ ಪಟಿಯಾಲ ಹೌಸ್ ಕೋರ್ಟ್ ಗೆ ಹಾಜರುಪಡಿಸಿದರು.
ಆರೋಪಿಯ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನೀತಾ ಶರ್ಮಾ ಅವರು, ಗೌತನ್ ಖೇತಾನ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ಇಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ದುಬೈ, ಯುಕೆ, ಜಾಂಬಿಯಾ, ಟ್ಯುನಿಷಿಯಾ, ಕೀನ್ಯಾ, ಮಾರಿಷಸ್, ಸಿಂಗಾಪುರ, ಸ್ವಿಟ್ಜರ್ಲೆಂಡ್ ಮತ್ತು ಇತರೆ ದೇಶಗಳ ಹಲವಾರು ಬ್ಯಾಂಕುಗಳ ಮೂಲಕ ಖೇತಾನ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಆರೋಪವಿದ್ದು, ಕಾಳಧನ ಕಾಯ್ದೆಯಡಿ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.